ಆಲಮಟ್ಟಿ: ಕಳೆದ ವಾರ ಗುಡದಿನ್ನಿ ಗ್ರಾಮದ ಹಳ್ಳಿಯ ಹೈದನೊಬ್ಬ ಟ್ಯಾಕ್ಟರ್ ಮೂಲಕ ಸತತವಾಗಿ 51 ಗಂಟೆ ನೇಗಿಲು ಹೊಡೆದು ಸಾಧನೆ ಮಾಡಿದ್ದನ್ನು ಮರೆಯುವ ಮುನ್ನವೇ ಇನ್ನೊಬ್ಬ ವ್ಯಕ್ತಿ ಅದಕ್ಕೂ ಮೀರಿ ಸಾಧನೆ ಮಾಡಿದ್ದು ವಿಶೇಷ.
ಅಂಥ ಸಾಧನೆ ಮಾಡಿದ್ದು ಬೇನಾಳ ಆರ್.ಎಸ್. ಪುನರ್ವಸತಿ ಕೇಂದ್ರದ ಹನುಮಂತ ಕಂಬಾರ ಎಂಬ ಯುವಕ. ಊಟ, ನಿದ್ರೆ ಬಿಟ್ಟು ಸತತವಾಗಿ 62 ಗಂಟೆಗಳ ಕಾಲ ಮೂರು ರಾತ್ರಿ, ಎರಡು ಹಗಲು ಟ್ಯಾಕ್ಟರ್ ಇಳಿಯದೇ, ಬೇನಾಳ ಗ್ರಾಮದ ಬಿಳೇಕುದರಿ ಸಹೋದರರಿಗೆ ಸೇರಿದ 32 ಎಕರೆ ಜಮೀನನ್ನು ಒಂಟ ಪಾಳ ನೇಗಿಲು (ಸಿಂಗಲ್ ಪಾಟ) ಹೊಡೆದಿದ್ದಾನೆ.
ಚಿಮ್ಮಲಗಿಯ ಚಿಂತಪ್ಪ ಸಿದ್ಧನಾಥ ಅವರಿಗೆ ಸೇರಿದ ಎಚ್ಎಮ್ಟಿ 3522 ಟ್ಯಾಕ್ಟರ್ 62 ಗಂಟೆಗಳ ಕಾಲ ಒಮ್ಮೆಯೂ ಬಂದ್ ಬೀಳದೆ ಅವನಿಗೆ ಸಾಥ್ ನೀಡಿತ್ತು.
ಈ ಸುದೀರ್ಘ ಅವಧಿಯಲ್ಲಿ ಕೇವಲ ಎಳನೀರು ಮಾತ್ರ ಸೇವಿಸಿ ಸಾಧನೆ ಮಾಡಿ ಆಲಮಟ್ಟಿ ಸುತ್ತಮುತ್ತಲಿನ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಸಾಧನೆಯ ನಂತರ ಗ್ರಾಮದ ಹಿರಿಯರು ಆತನಿಗೆ ಸೇಬು ತಿನ್ನಿಸಿ ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಿದರು.
‘ಇದೊಂದು ಅಪರೂಪದ ಘಟನೆ. ಕೃಷಿಯಲ್ಲಿಯೇ ವಿಭಿನ್ನ ಸಾಧನೆ ಮಾಡುವ ಉದ್ದೇಶವಿತ್ತು. ಅದಕ್ಕಾಗಿ ಟ್ರ್ಯಾಕ್ಟರ್ ಮೇಲೆ ನಿರಂತರವಾಗಿ ಉಳುಮೆ ಮಾಡುವ ಬಯಕೆಯಾತ್ತು. ಅದನ್ನೇ ಆಯ್ಕೆ ಮಾಡಿಕೊಂಡು ಪ್ರಯತ್ನಿಸಿದೆ. ಆರಂಭದಲ್ಲಿ ಸಾಧನೆಯ ಗುರಿ ಮುಟ್ಟುವ ಬಗ್ಗೆ ಆತಂಕವಿತ್ತು. ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎಂದು ಸ್ನೇಹಿತರು ಸಲಹೆ ನೀಡಿದರು. ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಅದು ಈಗ ಈಡೇರಿದೆ’ ಎಂಬುದು ಸಾಧನೆಯ ಖುಷಿಯಲ್ಲಿದ್ದ ಚಿಂತಪ್ಪನ ಅಭಿಪ್ರಾಯ.
ಮೆರವಣಿಗೆಯಲ್ಲಿ ಗ್ರಾಮದ ಶೇಖಪ್ಪ ಭಗವತಿ, ಹನುಮಂತ ತಳವಾರ, ಸಲೀಂ ಗಂಜಿಹಾಳ, ಯಮನಪ್ಪ ಮುತ್ತಗಿ, ಸಗರಪ್ಪ ಚನಗೊಂಡ, ಶಿವಪ್ಪ ಚಲವಾದಿ, ಮಹಾಂತೇಶ ತಳವಾರ, ಬಸಪ್ಪ ಕುಂಬಾರ, ಮೈಬೂಬ ಬಿಳೇಕುದರಿ, ಬಾಬು ಬೀಳಗಿ ಮೊದಲಾದವರು ಪಾಲ್ಗೊಂಡಿದ್ದರು.