ಗುರ್ಲಾಪೂರ (ಮೂಡಲಗಿ): `ಸರಳ, ಸಜ್ಜನಿಕೆ ಹಾಗೂ ತ್ಯಾಗಮಯಿ ಜೀವನಕ್ಕೆ ಇನ್ನೊಂದು ಹೆಸರು ಡಾ. ಸ.ಜ. ನಾಗಲೋಟಿಮಠ~ ಎಂದು ಮಕ್ಕಳ ಸಾಹಿತಿ ಬನಹಟ್ಟಿಯ ಪ್ರೊ. ಜಯವಂತ ಕಾಡದೇವರ ಹೇಳಿದರು.
ಇಲ್ಲಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗೋಕಾಕ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ದ ಶಾಲೆಗೊಂದು ಸಾಹಿತ್ಯಿಕ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಡಾ. ಎಸ್.ಜೆ. ನಾಗಲೋಟಿಮಠ ಅಂತರರಾಷ್ಟ್ರೀಯ ಫೌಂಡೇಶನ್ ಸಹಯೋಗದ ಡಾ. ಸ.ಜ.ನಾ. ಅವರ 72ನೇ ಜನ್ಮದಿನೋತ್ಸವದ ಅಂಗವಾಗಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೆಳಗಾವಿ ಜೆ.ಎನ್. ಮೆಡಿಕಲ್ ಕಾಲೇಜದ ಪೆಥಾಲಜಿ ಮ್ಯೂಜಿಯಂ, ವಿಜಾಪುರದ ಬಿ.ಎಲ್.ಡಿ.ಇ. ಕಾಲೇಜದ ದೇಹದ ಹರಳು ಮ್ಯೂಜಿಯಂ ಹಾಗೂ ಬೆಳಗಾವಿಯ ವಿಜ್ಞಾನ ಕೇಂದ್ರಗಳು ಡಾ. ಸ.ಜ.ನಾ. ಅವರ ಕರ್ತೃತ್ವ ಶಕ್ತಿಗೆ ಸಾಕ್ಷಿಗಳಾಗಿವೆ ಎಂದರು.
ವಿದ್ಯಾರ್ಥಿಗಳು ಡಾ. ಸ.ಜ.ನಾ. ಅವರಂತೆ ಶ್ರದ್ಧೆ, ಪರಿಶ್ರಮದ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿ ಕೊಳ್ಳಬೇಕು ಎಂದರು.
ಮುಖ್ಯ ಅತಿಥಿ ಪ್ರೊ. ಸಂಗಮೇಶ ಗುಜಗೊಂಡ ಮಾತನಾಡಿ, ಡಾ. ನಾಗಲೋಟಿಮಠ ಅವರು ವೈದ್ಯ ಕ್ಷೇತ್ರ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ ಎಂದರು.
ತಾಲ್ಲೂಕು ಕಸಾಪ ಅಧ್ಯಕ್ಷ ಬಾಲಶೇಖರ ಬಂದಿ ಅವರನ್ನು ಸನ್ಮಾನಿಸ ಲಾಯಿತು.
ಮುಖ್ಯ ಶಿಕ್ಷಕ ಎಸ್.ಬಿ. ತುಪ್ಪದ ಅಧ್ಯಕ್ಷತೆ ವಹಿಸಿದ್ದರು.
ಪುರಸಭೆ ಸದಸ್ಯರಾದ ರಾಮಣ್ಣ ನೇಮಗೌಡರ, ಲಕ್ಷ್ಮಣ ಗೌರಾಣಿ, ಶಿಕ್ಷಕರಾದ ಎಸ್.ಎಂ. ಗುಗ್ಗರಿ, ಆರ್. ಬಿ. ಗೋಕಾಕ, ಸುಭಾಸ ಭಾಗೋಜಿ, ಸುಜಾತಾ ರಾಮಗಿರಿ, ಜಿ.ಎಂ. ಜಗದಾಳ, ಎಂ.ಆರ್. ಬಿದರಿ, ಎಸ್. ಎಸ್. ಶಾಬನ್ನವರ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
ರವೀಂದ್ರ ಪಾಟೀಲ ಸ್ವಾಗತಿಸಿದರು, ಶ್ರೀಧರ ಪತ್ತಾರ ನಿರೂಪಿಸಿದರು, ಪಿ.ಬಿ. ಮದಬಾಂವಿ ವಂದಿಸಿದರು.