ಬೆಂಗಳೂರು/ಆನೇಕಲ್: ಒಂದು ತಿಂಗಳ ಅಂತರದಲ್ಲಿ ಡೆಂಗೆ ಜ್ವರವು ಆನೇಕಲ್ ತಾಲ್ಲೂಕಿನ ವ್ಯಾಪ್ತಿಯಲ್ಲಿ ಮತ್ತೊಂದು ಬಲಿ ಪಡೆದಿದೆ.
ಆನೇಕಲ್ ತಾಲ್ಲೂಕಿನ ಮಾಯಾಸಂದ್ರ ಮೇಡಹಳ್ಳಿ ಗ್ರಾಮದ ಶ್ರುತಿ ( 17 ) ಡೆಂಗೆ ಜ್ವರದಿಂದ ಸೋಮವಾರ ಮೃತಪಟ್ಟಿದ್ದಾರೆ. ಗ್ರಾಮದ ರಮೇಶ್ ಮತ್ತು ರತ್ನಮ್ಮ ದಂಪತಿಯ ಪುತ್ರಿ ಶ್ರುತಿ ಆನೇಕಲ್ನ ವಿಶ್ವ ಚೇತನ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು.
ಒಂದು ತಿಂಗಳಿನಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಂತರ ಜ್ವರ ಗಂಭೀರವಾಗಿದ್ದರಿಂದ ನಾರಾಯಣ ಹೃದಯಾಲಯದಲ್ಲಿ ದಾಖಲಾಗಿದ್ದರು, ಜ್ವರ ತೀವ್ರವಾದ ಕಾರಣ ಮೃತಪಟ್ಟರು ಎಂದು ಆನೇಕಲ್ ತಾಲ್ಲೂಕಿನ ಆರೋಗ್ಯಾಧಿಕಾರಿ ಡಾ.ಕುಮಾರ್ `ಪ್ರಜಾವಾಣಿ~ಗೆ ಹೇಳಿದರು.
ಕಳೆದ ತಿಂಗಳಷ್ಟೇ ಮಾಯಸಂದ್ರ ಗ್ರಾಮದ ಸಿಂಧು (9) ಎಂಬ ಬಾಲಕಿ ಡೆಂಗೆ ಜ್ವರದಿಂದ ಮೃತಪಟ್ಟಿದ್ದಳು. ಇದೀಗ ಮತ್ತೊಂದು ಸಾವು ಸಂಭವಿಸಿರುವುದು ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಆತಂಕ ಮೂಡಿಸಿದೆ.
ಮಾಯಸಂದ್ರ, ಮೇಡಹಳ್ಳಿ ಗ್ರಾಮಗಳಲ್ಲಿ ಡೆಂಗೆ ಜ್ವರ ಕಾಣಿಸಿಕೊಂಡು ಹಲವಾರು ಮಂದಿ ಜ್ವರಕ್ಕೆ ತುತ್ತಾಗಿದ್ದಾರೆ. ಮಾಯಸಂದ್ರದಲ್ಲಿ ತೆರೆದಿರುವ ತಾತ್ಕಾಲಿಕ ಆಸ್ಪತ್ರೆಯಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭಗತ್ ಸಿಂಗ್ ಯುವ ಸೇನೆಯ ರಾಜ್ಯ ಘಟಕ ಅಧ್ಯಕ್ಷ ಬಳ್ಳೂರು ಬಾಬು ಒತ್ತಾಯಿಸಿದ್ದಾರೆ.