ಆನೇಕಲ್: ತಾಲ್ಲೂಕಿನ ಮಾಯಸಂದ್ರದಲ್ಲಿ ಡೆಂಗೆ ಜ್ವರ ಕಾಣಿಸಿಕೊಂಡಿದ್ದು ಸೋಮವಾರ ಬಾಲಕಿಯೊಬ್ಬಳು ಮೃತ ಪಟ್ಟಿದ್ದು ಗ್ರಾಮದಲ್ಲಿ 100ಕ್ಕೂ ಹೆಚ್ಚು ಜನರು ಜ್ವರ ಪೀಡಿತರಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಬಹುತೇಕ ಕುಟುಂಬಗಳಲ್ಲಿ ಒಬ್ಬರಲ್ಲ ಒಬ್ಬರು ಜ್ವರದಿಂದ ಬಳಲುತ್ತಿದ್ದು ಗ್ರಾಮದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದ ಬಹುತೇಕ ಜನರು ತರಕಾರಿ ವ್ಯಾಪಾರ ಹಾಗೂ ಕೂಲಿ ಮಾಡಿ ಜೀವನ ಸಾಗಿಸುತ್ತಾರೆ. ಈ ಕುಟುಂಬಗಳ ಸದಸ್ಯರು ಕಾಯಿಲೆಗೆ ತುತ್ತಾಗಿರುವುದರಿಂದ ಅವರ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ.
ಆನೇಕಲ್ನ ಗಂಗಾ ಆಸ್ಪತ್ರೆಯಲ್ಲಿ 20ಕ್ಕೂ ಹೆಚ್ಚು ಮಂದಿ ದಾಖಲಾಗಿದ್ದಾರೆ. ನಾರಾಯಣ ಹೃದಯಾಲಯದಲ್ಲಿ ಸಹ 50ಕ್ಕೂ ಹೆಚ್ಚು ಮಂದಿ ಹಾಗೂ ಇತರ ಖಾಸಗಿ ಆಸ್ಪತ್ರೆಗಳಲ್ಲಿ ಮಾಯಸಂದ್ರದ ಗ್ರಾಮಸ್ಥರು ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ಮಾಯಸಂದ್ರದ ಸಿಂಧು ಎಂಬ ಹತ್ತು ವರ್ಷದ ಬಾಲಕಿ ಡೆಂಗೆ ಜ್ವರಕ್ಕೆ ತುತ್ತಾಗಿ ನಾರಾಯಣ ಹೃದಯಾಲಯದಲ್ಲಿ ಮೃತಪಟ್ಟ ನಂತರ ಜನರು ಭಯಗೊಂಡು ಆಸ್ಪತ್ರೆಗಳತ್ತ ಮುಖ ಮಾಡಿದ್ದಾರೆ.
ಸಚಿವ ನಾರಾಯಣ ಸ್ವಾಮಿ ಭೇಟಿ: ಸಮಾಜ ಕಲ್ಯಾಣ ಸಚಿವ ಎ.ನಾರಾಯಣ ಸ್ವಾಮಿ ಅವರು ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ವೈದ್ಯಾಧಿಕಾರಿ ಜೊತೆ ಚರ್ಚಿಸಿ ಗ್ರಾಮದ ಎಲ್ಲರೂ ವೈದ್ಯಕೀಯ ತಪಾಸಣೆಗೆ ಒಳಗಾಗುವಂತೆ ತಿಳಿಸಿದರು. ರೋಗ ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಗೋಪಾಲಕೃಷ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪ್ರಭುಚಂದ್ರ, ಜಿಲ್ಲಾ ಮಲೇರಿಯಾ ಆರೋಗ್ಯಾಧಿಕಾರಿ ಡಾ.ರವಿ ಪ್ರಕಾಶ್, ಜಿಲ್ಲಾ ಕ್ಷಯ ರೋಗ ಆರೋಗ್ಯಾಧಿಕಾರಿ ನದೀಮ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವೀರಭದ್ರಪ್ಪ ಮತ್ತಿತರರು ಹಾಜರಿದ್ದರು.
ಗ್ರಾಮದಲ್ಲಿ ಸಮರ್ಪಕ ಕಸ ವಿಲೇವಾರಿ ಹಾಗೂ ಕೊಳಚೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು.
385 ಜನರ ತಪಾಸಣೆ
ಅಧಿಕಾರಿಗಳು ಗ್ರಾಮದಲ್ಲಿ ಸ್ವಚ್ಛತೆ ಕಾರ್ಯ ಕೈಗೊಂಡಿದ್ದಾರೆ. ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆಯಲಾಗಿದ್ದು ಸಂಜೆಯ ವೇಳೆಗೆ 385 ಮಂದಿಯ ಆರೋಗ್ಯ ತಪಾಸಣೆ ಕೈಗೊಳ್ಳಲಾಗಿದೆ. ಈ ಪೈಕಿ 15ಜನರು ಜ್ವರದಿಂದ ಬಳಲುತ್ತಿದ್ದು ಅವರಿಗೆ ಚಿಕಿತ್ಸೆ ನೀಡಲಾಗಿದೆ ಮತ್ತು ರಕ್ತ ಪರೀಕ್ಷೆಗೆ ರಕ್ತ ಸಂಗ್ರಹಿಸಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ರಮೇಶ್ ತಿಳಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ರಮೇಶ್ ಸುದ್ದಿಗಾರರೊಂದಿಗೆ ಮಾತನಾಡಿ ಡೆಂಗೆ ಜ್ವರವು ಈಡಿಸ್ ಈಜಿಪ್ಟೈ ಎಂಬ ಸೊಳ್ಳೆ ಕಚ್ಚುವುದರಿಂದ ಬರುತ್ತದೆ. ಇದ್ದಕ್ಕಿದ್ದಂತೆ ತೀವ್ರ ಜ್ವರ, ತಲೆನೋವು, ಕೀಲು ನೋವು ಜ್ವರದ ಮುಖ್ಯ ಲಕ್ಷಣಗಳು. ಯಾರಿಗಾದರೂ ಈ ಲಕ್ಷಣಗಳಿದ್ದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ನಿರ್ಲಕ್ಷ್ಯ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಒತ್ತಾಯ
ಮಾಯಸಂದ್ರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಚಿಕಿತ್ಸಾಲಯವಿಲ್ಲ ಜನರು ಆರೋಗ್ಯ ಸಮಸ್ಯೆಗಳಿಗಾಗಿ ಆನೇಕಲ್ ಅಥವಾ ಅತ್ತಿಬೆಲೆಗೆ ಹೋಗಬೇಕಾಗುತ್ತದೆ ಗ್ರಾಮದಲ್ಲಿ ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗೋಪಾಲ್ ಒತ್ತಾಯಿಸಿದ್ದಾರೆ. ಮಾಯಸಂದ್ರ ಗ್ರಾಮಕ್ಕೆ ಹೊಂದಿಕೊಂಡಂತೆ ಮುತ್ಸಂದ್ರ, ಕಂಬಳಿಪುರ, ಕೊಡಲಿಪುರ, ಎಂ.ಮೆಡಹಳ್ಳಿ, ಹಳೇಹಳ್ಳಿ, ಹಾರೋಹಳ್ಳಿ, ಶೆಟ್ಟಹಳ್ಳಿ, ಭಕ್ತಿಪುರ ಗ್ರಾಮಗಳಿದ್ದು ಈ ಗ್ರಾಮಗಳ ಕೇಂದ್ರ ಭಾಗವಾದ ಮಾಯಸಂದ್ರದಲ್ಲಿ ಪ್ರಾಥಮಿಕ ಆರೋ್ಯೊ ಕೇಂ್ರೊ ತೆರೆಯುವ ಬ್ಗೊೆ ಸಚಿವರು ್ರೊಮ ಕೈಗೊ್ಳೊಬೇಕು ಎಂದು ಆ್ರೊಹಿಸಿ್ದೊಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.