ವಿಜಾಪುರ: `ಡೋಣಿ ನದಿಯ ಸಮಸ್ಯೆಗೆ ವೈಜ್ಞಾನಿಕವಾಗಿ ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕು ಎಂಬ ಸಂಪೂರ್ಣ ಮಾಹಿತಿ ನನ್ನಲ್ಲಿದೆ. ಇನ್ನೊಮ್ಮೆ ಈ ಸ್ಥಳಕ್ಕೆ ಭೇಟಿ ನೀಡಿ ಈ ಗಂಭೀರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಬದ್ಧ~ ಎಂದು ರಾಜಸ್ತಾನದ ನೀರಾವರಿ ತಜ್ಞ ರಾಜೇಂದ್ರ ಸಿಂಗ್ ಭರವಸೆ ನೀಡಿದರು.
ಇತ್ತೀಚೆಗೆ ಕೂಡಲ ಸಂಗಮಕ್ಕೆ ಆಗಮಿಸಿದ್ದ ಅವರು ಇಲ್ಲಿಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 13ರ ಸೇತುವೆ ಬಳಿ ಡೋಣಿ ನದಿಯ ಸ್ಥಿತಿಯನ್ನು ವೀಕ್ಷಿಸಿದರು. ಸವಳು ಹೆಚ್ಚಾಗಿ ಫಲವತ್ತಾದ ಜಮೀನು ಬರಡಾಗಿದ್ದನ್ನು ಕಂಡು ಹಳಹಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎ. ಜಿದ್ದಿ, `ಈ ನದಿಯಲ್ಲಿ ಮಳೆಗಾಲದಲ್ಲಿ ಮಹಾಪೂರ ಬಂದು ನದಿ ಪಕ್ಕದ ಅನೇಕ ಗ್ರಾಮಗಳಿಗೆ ತೀವ್ರ ತೊಂದರೆಯಾಗುತ್ತದೆ. ನೀರಿನ ರಭಸಕ್ಕೆ ಹೂಳು ತುಂಬಿ, ಗಿಡಗಂಟಿಗಳು ಬೆಳೆದು, ಲವಣಾಂಶ ಹೆಚ್ಚಾಗಿ ಬೆಳೆ ಬಾರದಂತೆ ಆಗಿವೆ~ ಎಂದರು ವಿವರಿಸಿದರು.
1973ರಲ್ಲಿ ಜಿಲ್ಲೆಯಲ್ಲಿ ಬರಗಾಲ ಆವರಿಸಿದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಡಿ. ದೇವರಾಜ್ ಅರಸ್ ಅವರ ಆದೇಶದ ಮೇರೆಗೆ ಹೂಳೆತ್ತುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಿಂದ ಕೆಲವು ವರ್ಷಗಳ ವರೆಗೆ ನದಿ ಪಕ್ಕದ ಭೂಮಿಯ ಫಲವತ್ತತೆ ಹೆಚ್ಚಿತ್ತು. ಈಗ ಮತ್ತೆ ಅದೇ ಸ್ಥಿತಿ ಉಂಟಾಗಿದೆ ಎಂದರು.
ಕೇಂದ್ರದ ಮಾಜಿ ಸಚಿವ ಸಿದ್ದು ನ್ಯಾಮಗೌಡ, ಪ್ರಮುಖರಾದ ರಿಯಾಜ್ ಫಾರೂಕಿ, ಪಂಚಪ್ಪ ಕಲಬುರ್ಗಿ, ಪೀಟರ್ ಅಲೆಕ್ಝಾಂಡರ್, ಡಾ.ರಾಜೇಂದ್ರ ಪೊದ್ದಾರ, ಅಪ್ಪಾಸಾಹೇಬ ಯರನಾಳ, ಮಾಜಿ ಶಾಸಕ ಎನ್.ಎಸ್. ಖೇಡ ಇತರರು ಈ ಸಂದರ್ಭದಲ್ಲಿದ್ದರು.