ಬೆಂಗಳೂರು: ಡ್ರಾಪ್ ಕೊಡುವ ಸೋಗಿನಲ್ಲಿ ಕೌಸಲ್ಯಾ ಎಂಬ ಮಹಿಳೆಯನ್ನು ಟೆಂಪೊ ಟ್ರಾವೆಲರ್ನಲ್ಲಿ ಕರೆದೊಯ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬೆದರಿಸಿ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಕೆ.ಆರ್.ಪುರದಲ್ಲಿ ಬಳಿ ಬುಧವಾರ ಹಾಡಹಗಲೇ ನಡೆದಿದೆ.
ತಮಿಳುನಾಡು ಮೂಲದ ಕೌಸಲ್ಯಾ ಅವರು ನಗರದ ಬಾಬೂಸಾಪಾಳ್ಯದ ಕಲ್ಯಾಣ ಮಂಟಪದಲ್ಲಿ ಆಯೋಜನೆಯಾಗಿದ್ದ ಸಂಬಂಧಿಕರ ಮದುವೆ ಸಮಾರಂಭಕ್ಕೆ ಬರುತ್ತಿದ್ದಾಗ ಈ ಘಟನೆ ನಡೆದಿದೆ.
ಚೆನ್ನೈನಿಂದ ಮಧ್ಯಾಹ್ನ ಕೆ.ಆರ್.ಪುರ ರೈಲು ನಿಲ್ದಾಣಕ್ಕೆ ಬಂದಿಳಿದ ಅವರು ಬಾಬೂಸಾಪಾಳ್ಯಕ್ಕೆ ಹೋಗಲು ಸಮೀಪದ ಬಸ್ ನಿಲ್ದಾಣಕ್ಕೆ ನಡೆದು ಬಂದಿದ್ದಾರೆ. ಅದೇ ವೇಳೆಗೆ ಅಲ್ಲಿಗೆ ಟೆಂಪೊ ಟ್ರಾವೆಲರ್ನಲ್ಲಿ ಬಂದ ಮೂವರು ಅಪರಿಚಿತರು ಡ್ರಾಪ್ ಕೊಡುವುದಾಗಿ ನಂಬಿಸಿ ಅವರನ್ನು ವಾಹನಕ್ಕೆ ಹತ್ತಿಸಿಕೊಂಡಿದ್ದಾರೆ. ನಂತರ ಹೊಸಕೋಟೆ ಬಳಿಗೆ ಕರೆದೊಯ್ದು ಮಾರಕಾಸ್ತ್ರಗಳಿಂದ ಬೆದರಿಸಿ 70 ಗ್ರಾಂ ಚಿನ್ನದ ಸರ, ಹಣ ಹಾಗೂ ಮೊಬೈಲ್ ಕಿತ್ತುಕೊಂಡಿದ್ದಾರೆ. ಬಳಿಕ ವಾಹನದಿಂದ ಕೆಳಗೆ ತಳ್ಳಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದರೋಡೆಕೋರರು ಕೃತ್ಯಕ್ಕೆ ಬಳಸಿರುವ ವಾಹನದ ನೋಂದಣಿ ಸಂಖ್ಯೆ ಗೊತ್ತಾಗಿದೆ. ಈ ಸುಳಿವು ಆಧರಿಸಿ ಸದ್ಯದಲ್ಲೇ ಅವರನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.ಮಹದೇವಪುರ ಠಾಣೆಯಲ್ಲಿ ದೂರು ದಾಖಲಾಗಿದೆ.