ಪಟ್ನಾ (ಐಎಎನ್ಎಸ್): ಅಂತರ್ಜಾತಿ ವಿವಾಹವಾದ ಮಗನ ವಿರುದ್ಧವೇ ತಂದೆಯೊಬ್ಬ ರೂ. 1ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಘಟನೆ ಬಿಹಾರದಲ್ಲಿ ನಡೆದಿದೆ.
ಪಟ್ನಾದ ವಕೀಲ ಸಿದ್ದನಾಥ ಶರ್ಮ ಎಂಬುವರೇ ತಮ್ಮ ಮಗ ಸುಶಾಂತ್ ಜಸು ವಿರುದ್ಧ ಮೊಕದ್ದಮೆ ಹೂಡಿದವರು.
‘ಮಗ ಅಂತರ್ಜಾತಿ ವಿವಾಹವಾಗಿದ್ದರಿಂದ ನನ್ನ ವ್ಯಕ್ತಿತ್ವ ಮತ್ತು ಮರ್ಯಾದೆಗೆ ಧಕ್ಕೆ ಉಂಟಾಗಿದೆ. ನಮ್ಮ ಆಸೆಗೆ ವಿರುದ್ಧವಾಗಿ ಮಗ ವಿವಾಹ ಆಗಿದ್ದಾನೆ. ಹಾಗಾಗಿ, ಅವನು ನಮಗೆ ಪರಿಹಾರ ನೀಡಬೇಕು’ ಎಂದು ಕೋರಿ ಪಟ್ನಾದ ನ್ಯಾಯಾಲಯದಲ್ಲಿ ಸಿದ್ದನಾಥ ಮೊಕದ್ದಮೆ ದಾಖಲಿಸಿದ್ದಾರೆ.
‘ಮಗನ ಆರೈಕೆಗಾಗಿ ನಾನು ಮತ್ತು ನನ್ನ ಹೆಂಡತಿ ತುಂಬಾ ಕಷ್ಟಪಟ್ಟಿದ್ದೇವೆ. ಹಣವನ್ನೂ ಖರ್ಚು ಮಾಡಿದ್ದೇವೆ. ಅವನಿಂದ ನಮಗೆ ಬಹಳಷ್ಟು ನಿರೀಕ್ಷೆ ಇತ್ತು. ಆದರೆ, ಮಗ ಕೇವಲ ಎರಡು ವರ್ಷಗಳ ಹಿಂದೆಯಷ್ಟೇ ಪರಿಚಯವಾದ ಇತರ ಜಾತಿಯ ಹುಡುಗಿಯನ್ನು ವಿವಾಹವಾಗಿದ್ದಾನೆ. ಇದರಿಂದ ಸುಮಾರು 400 ವರ್ಷಗಳಷ್ಟು ಹಳೆಯದಾದ ನಮ್ಮ ಕುಟುಂಬದ ಸಂಪ್ರದಾಯಕ್ಕೆ ಧಕ್ಕೆಯಾಗಿದೆ. ಇದುವರೆಗೆ ನಮ್ಮ ಕುಟುಂಬದಲ್ಲಿ ಯಾರೂ ಅಂತರ್ಜಾತಿ ವಿವಾಹವಾಗಿಲ್ಲ’ ಎಂದು ಅವರು ಮೊಕದ್ದಮೆಯಲ್ಲಿ ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಮಗ ನನ್ನ ಮತ್ತು ಕುಟುಂಬದ ಹೆಸರನ್ನು ಇನ್ನು ಮುಂದೆ ಬಳಸಿಕೊಳ್ಳಬಾರದು. ಆಕಸ್ಮಾತ್ ಬಳಸಿದ್ದಲ್ಲಿ ಪ್ರತಿ ಬಾರಿಯೂ ರೂ. 10 ಸಾವಿರ ಹಣವನ್ನು ಹೆಸರಿನ ಹಕ್ಕುಸ್ವಾಮ್ಯಕ್ಕಾಗಿ ನನಗೆ ಪಾವತಿಸಬೇಕು ಎಂದೂ ಹೇಳಿದ್ದಾರೆ.
ಸಿದ್ದನಾಥ ಅವರ ಮಗ ಸುಶಾಂತ್ ಅವರು ಗುಜರಾತಿನ ಪಾಲಂಪುರದಲ್ಲಿ ಹಿರಿಯ ತೆರಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪಟ್ನಾದ ಖಾಸಗಿ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿರುವ ಯುವತಿಯನ್ನು 2013ರ ನ. 19ರಂದು ವಿವಾಹವಾಗಿದ್ದರು.
ಪೋತ್ಸಾಹಧನ: ಬಿಹಾರದಲ್ಲಿ ಅಂತರ್ಜಾತಿ ವಿವಾಹವನ್ನು ಪೋತ್ಸಾಹಿಸುವ ಸಲುವಾಗಿ ಸರ್ಕಾರ ರೂ. 50 ಸಾವಿರ ಪ್ರೋತ್ಸಾಹಧನ ನೀಡುತ್ತಿದೆ. ಈ ಮುನ್ನ ರೂ. 25 ಸಾವಿರ ಹಣವನ್ನು ಪೋತ್ಸಾಹಧನವಾಗಿ ನೀಡುತ್ತಿದ್ದು, ಈಚೆಗಷ್ಟೇ ಸರ್ಕಾರ ಆ ಮೊತ್ತವನ್ನು ದುಪ್ಪಟ್ಟುಗೊಳಿಸಿದೆ.