ವಿರೂಪಾಕ್ಷಪುರ (ಕೊಡಿಗೇಹಳ್ಳಿ) ಮಾರಮ್ಮನ ದೇವಸ್ಥಾನದ ಪಕ್ಕದಲ್ಲಿ ನೂರಾರು ವರ್ಷಗಳಷ್ಟು ಹಳೆಯದಾದ ಅಶ್ವತ್ಥ ವೃಕ್ಷವಿದೆ. ಇದರ ಕಾಂಡವೇನೋ ದೊಡ್ಡ ಗಾತ್ರದಲ್ಲಿದ್ದು, ಒಂದೊಂದು ರೆಂಬೆ ಕೊಂಬೆಗಳೂ ಒಂದೊಂದು ಮರದಂತಿವೆ. ಇವು ರಸ್ತೆಯ ನಾಲ್ಕೂ ಕಡೆಗೂ ಮುಗಿಲು ಮುಟ್ಟುವಂತೆ ಚಾಚಿಕೊಂಡಿವೆ. ಮರದ ಸುತ್ತಲೂ ಅಪಾರ್ಟ್ಮೆಂಟ್ಗಳಿದ್ದು, ರಸ್ತೆ ಸಂಚಾರದಿಂದ ಸದಾ ಗಿಜುಗುಟ್ಟುತ್ತಿರುತ್ತದೆ.
ವಯಸ್ಸಾದ ಬೃಹತ್ ರೆಂಬೆಗಳ ಕೆಳಗೆ ಶಾಲಾ ವಾಹನಗಳು, ಇತರೇ ವಾಹನಗಳು, ಜನರು ಸಂಚರಿಸುತ್ತಲೇ ಇರುತ್ತಾರೆ. ಹೀಗೆ ರಸ್ತೆಯ ಮೇಲೆ ಹರಡಿಕೊಂಡಿರುವ ರೆಂಬೆ ಸಮೂಹಗಳಿಂದ ಅಪಾಯವಿದೆಯೋ ಇಲ್ಲವೋ ಎಂಬುದನ್ನು ಬಿ.ಬಿ.ಎಂ.ಪಿ.ಯವರು ತಜ್ಞರಿಂದ ಪರೀಕ್ಷಿಸಿ ಕ್ರಮ ತೆಗೆದುಕೊಂಡರೆ ಅನಾಹುತ ತಪ್ಪಿಸಿದಂತಾಗುತ್ತದೆ.