ಬರ್ಲಿನ್ (ಪಿಟಿಐ): ಜರ್ಮನಿಯಲ್ಲಿ ನವ ನಾಝಿ ಘಟಕ 10 ವರ್ಷಗಳ ಹಿಂದೆ ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಎಸಗಿದ್ದ ಹತ್ಯೆ ಪ್ರಕರಣಗಳ ಕುರಿತ ತನಿಖೆಗೆ ರಚಿಸಲಾಗಿರುವ ಸಂಸದೀಯ ತನಿಖಾ ಸಮಿತಿಯ ನೇತೃತ್ವವನ್ನು ಭಾರತೀಯ ಮೂಲದ ಸಂಸದ ಸೆಬಸ್ಟಿಯಾನ್ ಎಡಥಿ ವಹಿಸಲಿದ್ದಾರೆ.
ಹತ್ಯೆ ನಡೆದು ದಶಕ ಕಳೆದರೂ ಕೊಲೆಗಾರರ ಸುಳಿವು ಪತ್ತೆ ಹಚ್ಚುವಲ್ಲಿ ತನಿಖಾ ತಂಡಗಳು ವಿಫಲವಾಗಿರುವುದರಿಂದ, 11 ಸದಸ್ಯರ ಸಮಿತಿ ರಚನೆಗೆ ಎಲ್ಲ ಪಕ್ಷಗಳ ಪ್ರತಿನಿಧಿಗಳು ಸಂಸತ್ತಿನ ಕೆಳಮನೆ ಬಂಡೆಸ್ಟಾಗ್ನಲ್ಲಿ ಒಮ್ಮತದ ಒಪ್ಪಿಗೆ ಸೂಚಿಸಿದ್ದಾರೆ.
ಒಂಬತ್ತು ಟರ್ಕಿಗಳು, ಗ್ರೀಕ್ ಉದ್ಯಮಿಗಳು, ಮಹಿಳಾ ಪೊಲೀಸ್ ಅಧಿಕಾರಿ ಹತ್ಯೆಗೀಡಾದ ಪ್ರಕರಣಗಳು ಸೇರಿದಂತೆ ಹಲವು ಪ್ರಕರಣಗಳ ಬಗ್ಗೆ ಸಮಿತಿ ತನಿಖೆ ನಡೆಸಲಿದೆ.
ಜರ್ಮನಿಯ ಥುರಿಂಜಿಯಾದಲ್ಲಿರುವ ಬಲಪಂಥೀಯ ತೀವ್ರಗಾಮಿ ಗುಂಪು `ನ್ಯಾಷನಲ್ ಸೋಷಲಿಸ್ಟ್ ಅಂಡರ್ಗ್ರೌಂಡ್~ ತನ್ನ ಸುಳಿವು ಬಹಿರಂಗ ಪಡಿಸದೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬ ಬಗ್ಗೆಯೂ ಸಮಿತಿ ತನಿಖೆ ನಡೆಸುವ ನಿರೀಕ್ಷೆ ಇದೆ.