ಸುಳ್ಯ: ಮುಖ್ಯಮಂತ್ರಿ ಯಡಿಯೂರಪ್ಪ ತಪ್ಪು ಮಾಡದೇ ಇದ್ದರೆ ತನಿಖೆಗೆ ಹೆದರುವುದು ಏಕೆ. ಅವರು ತಪ್ಪುಗಾರರಲ್ಲದೆ ಇರುತ್ತಿದ್ದರೆ ಕೋರ್ಟ್ ಯಾಕೆ ಪ್ರಕರಣವನ್ನು ವಿಚಾರಣೆಗೆ ಸ್ವೀಕರಿಸಿ ಪ್ರಕರಣ ದಾಖಲಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಜಿ.ಹೆಗಡೆ ಪ್ರಶ್ನಿಸಿದರು.
ಸಂಪಾಜೆ ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಗ್ರಾಪಂ ಸಭಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಪಂ, ತಾಪಂ ಚುನಾಯಿತ ಪ್ರತಿನಿಧಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪಗೌಡ ಅಭಿನಂದನಾ ಭಾಷಣ ಮಾಡಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪತಾಕೆಯನ್ನು ತಾಲ್ಲೂಕಿನಲ್ಲಿ ಹಾರಿಸೋಣ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಸರಸ್ವತಿ ಕಾಮತ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಜಯಂತಿ ತೊಡಿಕಾನ ಮಾತನಾಡಿ ಮುಂದಿನ ಐದು ವರ್ಷಗಳು ಅಭಿವೃದ್ಧಿಯ ಬಗ್ಗೆ ಹೆಚ್ಚು ಗಮನ ಕೊಡುತ್ತೇವೆ ಜನಸಾಮಾನ್ಯರ, ಬಡವರ ಕಷ್ಟಗಳಿಗೆ ಸ್ಪಂಧಿಸಿ ಕೆಲಸ ಮಾಡುತ್ತೇವೆ ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ದಿವಾಕರ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಗೋಕುಲ್ ದಾಸ್, ಮಹಮ್ಮದ್ ಗೂನಡ್ಕ, ಚಂದ್ರಶೇಖರ ಕಾಮತ್, ಬಿ.ಎಸ್.ಯಮುನಾ, ಗ್ರಾಪಂ ಉಪಾಧ್ಯಕ್ಷೆ ಪುಸ್ಪಾವತಿ ದಂಡೆಕಜೆ, ಸೊಸೈಟಿ ಉಪಾಧ್ಯಕ್ಷೆ ಉಷಾ ರಾಮ ನಾಯ್ಕ, ಅರಂತೋಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಶ್ರಫ್ ಗುಂಡಿ, ಸದಸ್ಯರಾದ ಸದಾನಂದ ಅಡ್ತಲೆ, ಕೇಪು, ತಿಮ್ಮಯ್ಯ ಮಿತ್ತಡ್ಕ, ಅರಂತೋಡು ವಲಯ ಕಾಂಗ್ರೆಸ್ನ ದೇವಪ್ಪ ಗೌಡ, ತೊಡಿಕಾನ ವಲಯ ಕಾಂಗ್ರೆಸ್ ಅಧ್ಯಕ್ಷ ಕೇಶವ ಪ್ರಸಾದ್, ಕೆ.ಆರ್.ಜಗದೀಶ್ ರೈ, ಆರ್.ಕೆ. ಮಹಮ್ಮದ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಗಂ ಅಬ್ದುಲ್ ಖಾದರ್ ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆಗೊಂಡರು. ಕೇರಳದಲ್ಲಿ ರೈಲು ಹಳಿ ದಾಟುವಾಗ ಇಬ್ಬರನ್ನು ರಕ್ಷಿಸಿದ ಇರ್ಷಾದ್ ಗೂನಡ್ಕ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಜಿ.ಕೆ.ಹಮೀದ್, ಬಿ.ಎಸ್.ಕಾಂತಿ ಇದ್ದರು.
ಸಮಾರಂಭಕ್ಕೂ ಮುನ್ನ ವೈಭವದ ಮೆರವಣಿಗೆ ಏರ್ಪಡಿಸಲಾಗಿತ್ತು. ಕೂಲಿಶೆಡ್ಡಿನಿಂದ ಕಲ್ಲುಗುಂಡಿ ಸೊಸೈಟಿಯವರೆಗೆ ಮೆರವಣಿಗೆ ಸಾಗಿ ಗ್ರಾಮ ಪಂಚಾಯಿತಿ ಸಭಾಭವನದ ಬಳಿ ಸಮಾಪನಗೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.