ಕೃಷ್ಣ ತಾನು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದನ್ನು ರೂಢಿ ಮಾಡಿಕೊಂಡಿದ್ದ. ಒಂದು ದಿನ ಹಾಲಿನ ಲೋಟ ಕೈಜಾರಿ ಬಿತ್ತು. ಅದೇ ವೇಳೆಗೆ ಅವನ ತಂಗಿ ಸುಮಾ ಅಲ್ಲಿಗೆ ಬಂದಳು. ಅದನ್ನೇ ನೆಪ ಮಾಡಿಕೊಂಡು ಅಪ್ಪ- ಅಮ್ಮನಿಗೆ ಸುಮಾ ಹಾಲಿನ ಲೋಟ ಕೆಳಗೆ ಚೆಲ್ಲಿದಳು ಎಂದು ಹೇಳಿದ. ಸುಮಾಳಿಗೆ ಅಮ್ಮ ಚೆನ್ನಾಗಿ ಬೈದರು.
ಅಂದು ಅಮ್ಮ ಕೃಷ್ಣನಿಗೆ ಹೊಸ ನೋಟ್ ಪುಸ್ತಕಗಳನ್ನು ತಂದುಕೊಟ್ಟಿದ್ದರು. ಅದನ್ನು ತೊಡೆ ಮೇಲೆ ಇಟ್ಟುಕೊಂಡು ಪೆನ್ನಿಗೆ ಇಂಕ್ ಹಾಕುತ್ತಿದ್ದ ಕೃಷ್ಣ ಪುಸ್ತಕಗಳ ಮೇಲೂ ಇಂಕ್ ಸುರಿದುಬಿಟ್ಟ. ಈ ವಿಷಯ ಅಮ್ಮನಿಗೆ ಗೊತ್ತಾದರೆ ಹೊಡೆಯುತ್ತಾರೆ ಎಂದು ಅವನಿಗೆ ಭಯವಾಯಿತು. ಅವನಿಗೊಂದು ಉಪಾಯ ಹೊಳೆಯಿತು.
ಕೋಣೆಯ ಹೊರಗೆ ಓಡಾಡುತ್ತಿದ್ದ ತಂಗಿಯನ್ನು ಕರೆದ. ಒಳಬಂದ ಸುಮಾ ಅಣ್ಣನ ಗಾಬರಿಯನ್ನು ಗಮನಿಸಿದಳು. ಅಷ್ಟರಲ್ಲೇ ಅಮ್ಮನೂ ಒಳಬಂದರು ತಕ್ಷಣ ಸುಮಾ, ‘ಅಮ್ಮ ಅಣ್ಣ ಇಂಕ್ ಹಾಕುವಾಗ ನಾನು ಅವನನ್ನು ಅಲ್ಲಾಡಿಸಿದೆ. ಇಂಕ್ ಚೆಲ್ಲಿ ಹೋಯಿತು’ ಎಂದಳು.
‘ನಿನ್ನಿಂದ ಒಂದು ನೋಟ್ ಪುಸ್ತಕ ಹಾಳಾಯಿತು’ ಎಂದು ಅಮ್ಮ ಬೈದರು.
‘ನೀನ್ಯಾಕೆ ಅಮ್ಮನಿಗೆ ಸುಳ್ಳು ಹೇಳಿದೆ’ ಎಂದು ಅಮ್ಮ ಒಳಗೆಹೋದ ಮೇಲೆ ಕೃಷ್ಣ ಕೇಳಿದ. ಆಗ ಸುಮಾ- ‘ಅಮ್ಮನ ಬೈಗುಳವನ್ನು ಸಹಿಸುವ ಶಕ್ತಿ ನಿನಗಿಲ್ಲ. ನನಗದು ಅಭ್ಯಾಸವಾಗಿ ಹೋಗಿದೆ. ಅದಕ್ಕೆ ನಾನೇ ತಪ್ಪು ಹೊತ್ತಿಕೊಂಡೆ’ ಎಂದಳು.
ಅಂದಿನಿಂದ ಕೃಷ್ಣ ಯಾರ ಮೇಲೂ ತನ್ನ ತಪ್ಪನ್ನು ಹೊರಿಸದೇ ತಪ್ಪು ಒಪ್ಪಿಕೊಳ್ಳುವುದನ್ನು, ತಿದ್ದಿಕೊಳ್ಳುವುದನ್ನು ಕಲಿತ.