ಕನ್ನಡ ಚಳವಳಿಗಾರರಾಗಿ ತಮಿಳು ಚಿತ್ರವನ್ನು ರೀಮೇಕ್ ಮಾಡುವುದೇ? ಈ ಪ್ರಶ್ನೆ ಎಲ್ಲರಲ್ಲೂ ಇತ್ತು. ಪತ್ರಕರ್ತರ ಸಾಲಿನಿಂದ ಪ್ರಶ್ನೆ ತೂರಿ ಬರುವ ಮೊದಲೇ ರಕ್ಷಣಾತ್ಮಕ ಆಟವಾಡಿತು ಪ್ರವೀಣ್ ಶೆಟ್ಟಿ ಬಳಗ.
`ಇದು ತಮಿಳು ಚಿತ್ರವಾಗಿದ್ದರೂ ದೇಶದ ಎಲ್ಲಾ ರಾಜ್ಯಗಳ ಪರಿಸ್ಥಿತಿಗೂ
ಸಿಂಧು ಲೋಕನಾಥ್ ಮತ್ತು ನಿರಂಜನ ಶೆಟ್ಟಿ |
ಅನ್ವಯವಾಗುವ ಕಥೆ ಇದರಲ್ಲಿದೆ. ಕನ್ನಡ ನಾಡು-ನುಡಿಗೆ ಸಮಸ್ಯೆ ಬಂದಾಗ ಮಾತ್ರ ನಮ್ಮ ಹೋರಾಟ. ಉಳಿದ ಸಮಯದಲ್ಲಿ ನಾವೆಲ್ಲಾ ಒಂದು~ ಎಂಬ ಸಾಮರಸ್ಯದ ಮಂತ್ರ ಪಠಣ ಮಾಡಲಾಯಿತು.
ತಮಿಳಿನಲ್ಲಿ ಈ ವರ್ಷ ತೆರೆಕಂಡ ಯಶಸ್ವಿ ಚಿತ್ರ `ವಜಕ್ಕು ಎನ್ 18/9~ ಅನ್ನು `ಕೇಸ್ ನಂ. 18/9~ ಎಂದು ಕನ್ನಡಕ್ಕೆ ತರುತ್ತಿದ್ದಾರೆ ನಿರ್ದೇಶಕ ಮಹೇಶ್ರಾವ್. ಈ ಚಿತ್ರಕ್ಕೆ ಕನ್ನಡ ಚಳವಳಿಯಲ್ಲಿ ಗುರುತಿಸಿಕೊಂಡ ನಾಲ್ವರು ಸೇರಿ ಬಂಡವಾಳ ಹೂಡುತ್ತಿದ್ದಾರೆ- ಪ್ರವೀಣ್ ಶೆಟ್ಟಿ, ಶಿವಾನಂದ ಶೆಟ್ಟಿ, ವಿ.ಕೆ. ಮೋಹನ್ ಮತ್ತು ಕಾಂತಿ ಶೆಟ್ಟಿ.
ತಮಿಳು ಸಿನಿಮಾ ರೀಮೇಕ್ ಮಾಡುವುದಿರಲಿ, ಅದನ್ನು ಒಮ್ಮೆ ನೋಡಿ ಎಂದು ಸೀಡಿ ತಂದು ಕೊಟ್ಟರೂ ಪ್ರವೀಣ್ ಶೆಟ್ಟಿ ಆರಂಭದಲ್ಲಿ ಒಪ್ಪಿರಲಿಲ್ಲವಂತೆ. ಚಿತ್ರವನ್ನು ಮೊದಲು ವೀಕ್ಷಿಸಿದ ವಿ.ಕೆ. ಮೋಹನ್ ಅವರ ಮನವೊಲಿಸಿದರಂತೆ. ಚಿತ್ರದ ಸಂಪೂರ್ಣ ಹಕ್ಕುಗಳನ್ನು ಖರೀದಿಸಿಯೇ ಕನ್ನಡಕ್ಕೆ ತರಲಾಗುತ್ತಿದೆ.
ಜಾಗತೀಕರಣದ ಪರಿಣಾಮದ ಹಿನ್ನೆಲೆಯನ್ನು ಚಿತ್ರ ಬಿಂಬಿಸುವುದರಿಂದ ಅದಕ್ಕೆ ಗಡಿ ಭಾಷೆಯ ಹಂಗು ಬೇಕಿಲ್ಲ ಎನ್ನುವುದು ಶಿವಾನಂದ ಶೆಟ್ಟಿ ಸಮರ್ಥನೆ. ಮನರಂಜನೆಯ ಜೊತೆ ಒಳ್ಳೆಯ ಸಂದೇಶ ಚಿತ್ರದಲ್ಲಿದೆ. ಹೀಗಾಗಿಯೇ ಎಲ್ಲರೂ ಒಂದಾಗಿ ಹಣ ಹೂಡಿ ಚಿತ್ರ ನಿರ್ಮಿಸುತ್ತಿದ್ದೇವೆ ಎಂಬ ವಿವರಣೆ ಅವರದು. ಕನ್ನಡದ ಸ್ಥಳೀಯತೆಗೆ ತಕ್ಕಂತೆ ಸನ್ನಿವೇಶಗಳು ಬದಲಾಗುತ್ತವೆ ಎಂಬ ಸೂಚನೆಯನ್ನು ಅವರು ನೀಡಿದರು.
ಅದು ತಮಿಳಿನ ಚಿತ್ರ ಎನ್ನಿಸಲಿಲ್ಲ. ನಮ್ಮದೇ ಬದುಕನ್ನು ದೃಶ್ಯರೂಪದಲ್ಲಿ ದಾಖಲಿಸಿದಂತಿದೆ ಎಂದರು ವಿ.ಕೆ. ಮೋಹನ್. ಮತ್ತೊಬ್ಬ ನಿರ್ಮಾಪಕಿ ಕಾಂತಿಗೆ ಕೂಡ ಇದು ಮೊದಲ ಚಿತ್ರ. `ಚೆಲುವಿ~ ಎಂಬ ಧಾರಾವಾಹಿಯನ್ನೂ ಅವರು ನಿರ್ಮಿಸುತ್ತಿದ್ದಾರೆ.
`ಇದು ನನ್ನ ಸಿನಿಮಾ ಎಂದು ಹೇಳಿಕೊಳ್ಳುವ ಯಾವ ಹಕ್ಕೂ ನನಗಿಲ್ಲ.
ಆಸ್ಕರ್ ನಾಮನಿರ್ದೇಶಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಪರ್ಧಿಸಿರುವ ಈ ಚಿತ್ರವನ್ನು ಕನ್ನಡದಲ್ಲಿ ನಿರ್ದೇಶಿಸುವುದು ಸುಲಭದ ಮಾತಲ್ಲ. ಜೊತೆಗೆ ಜವಾಬ್ದಾರಿಯೂ ಹೆಚ್ಚಿದೆ~ ಎಂದರು ಮಹೇಶ್ರಾವ್. ತುಂಬಾ ವಾಸ್ತವಿಕವಾಗಿರುವ ಸಿನಿಮಾದ ಚಿತ್ರಕಥೆಯನ್ನು ಸ್ವಲ್ಪವೂ ಬದಲಿಸಲು ಸಾಧ್ಯವಿಲ್ಲ. ಹೀಗಾಗಿ ಕಾಮಿಡಿ ಟ್ರ್ಯಾಕ್ನಲ್ಲಿ ತುಸು ಬದಲಾವಣೆ ಮಾಡುತ್ತಿದ್ದೇವೆ ಎಂದರು.
ನಿರಂಜನ್ ಶೆಟ್ಟಿ ಮತ್ತು ಸಿಂಧು ಲೋಕನಾಥ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದರೆ, ಹೊಸ ಹುಡುಗ ಅಭಿಗೆ ಜೊತೆಯಾಗಿ ಶ್ವೇತಾ ಪಂಡಿತ್ ನಟಿಸುತ್ತಿದ್ದಾರೆ. ನಿರಂಜನ್ಶೆಟ್ಟಿ ಚಿತ್ರಕ್ಕಾಗಿ 10 ಕೆ.ಜಿ. ತೂಕ ಕಳೆದುಕೊಂಡಿರುವುದನ್ನು ಹೇಳಿಕೊಂಡರು.
ಬಾಲನಟನಾಗಿ ಹೆಸರು ಮಾಡಿದ್ದ ಕಾರ್ತಿಕ್ ಹಾಸ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. `ಸೈಕೋ~, `ಜೀವ~ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿದ್ದ ಸಭಾ ಕುಮಾರ್ ಛಾಯಾಗ್ರಹಣದ ಹೊಣೆ ಹೊತ್ತಿದ್ದರೆ, ಅರ್ಜುನ್ ಜನ್ಯ ಸ್ವರಗಳನ್ನು ಹೆಣೆಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.