ಚೆನ್ನೈ (ಪಿಟಿಐ): ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವುದರಲ್ಲೂ ಲಿಂಗ ತಾರತಮ್ಯ ನಡೆದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಯಾವ ಪಕ್ಷವೂ ಮಹಿಳೆಗೆ ಸಮಾನ ಅವಕಾಶ ನೀಡಿಲ್ಲ.
ಮಹಿಳಾ ಮೀಸಲಾತಿ ಮಸೂದೆಯ ಪ್ರಬಲ ಪ್ರತಿಪಾದಕರಾದ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರು ತಮ್ಮ ಪಕ್ಷದಿಂದ ಇಬ್ಬರು ಮಹಿಳೆಯರಿಗಷ್ಟೇ ಅವಕಾಶ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯಕ್ಕೆ ಒಬ್ಬ ಮಹಿಳೆಯೇ ಸಾಕಾಗಿದ್ದಾರೆ’ ಎಂದು ಪರೋಕ್ಷವಾಗಿ ಜಯಲಲಿತಾ ಅವರನ್ನು ಕುಟುಕಿ ವಿಷಯವನ್ನು ತೇಲಿಸಿದ್ದಾರೆ.
ಮುಖ್ಯಮಂತ್ರಿ ಜಯಲಲಿತಾ ಅವರೇ ಮುಖ್ಯಸ್ಥೆಯಾಗಿರುವ ಎಐಎಡಿಎಂಕೆ ಕೂಡ 39 ಸ್ಥಾನಗಳಲ್ಲಿ ನಾಲ್ಕು ಕಡೆಗಳಲ್ಲಿ ಮಾತ್ರ ಮಹಿಳೆಯರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್, ಮೂವರು ಸ್ತ್ರೀಯರನ್ನಷ್ಟೇ ಕಣಕ್ಕಿಳಿಸಿದೆ.