ಭರಮಸಾಗರ: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ತಮ್ಮನೇ ಸ್ವಂತ ಅಣ್ಣನನ್ನು ಕೊಲೆ ಮಾಡಿದ ಘಟನೆ ಹೋಬಳಿಯ ಪಳಕೆಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಉಮೇಶ್ (25) ಎಂಬಾತ ಅಣ್ಣ ಹನುಮಂತಪ್ಪ (32) ಅವರನ್ನು ಕೊಲೆ ಮಾಡಿದ ಎಂದು ಆರೋಪಿಸಲಾಗಿದೆ.
ಹನುಮಂತಪ್ಪ ಅವರಿಗೆ ಇಬ್ಬರು ತಮ್ಮಂದಿರು ಇದ್ದು, ಈಚೆಗಷ್ಟೇ ಸಹೋದರರಿಂದ ಬೇರೆಯಾಗಿ ತಾಯಿ, ಪತ್ನಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಮೂರ್ನಾಲ್ಕು ದಿನಗಳ ಹಿಂದೆ ಹನುಮಂತಪ್ಪ ತಾಯಿ ಬೋರಮ್ಮ ಅವರೊಂದಿಗೆ ಜಗಳ ಮಾಡಿಕೊಂಡಿದ್ದ ಎನ್ನಲಾಗಿದೆ.
ಈ ವಿಷಯ ತಿಳಿದ ಉಮೇಶ್ ಅಣ್ಣನ ಜತೆ ಜಗಳವಾಡುವಾಗ ಮಾತಿನ ಚಕಮಕಿ ನಡೆದು, ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಹನುಮಂತಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.