ತರೀಕೆರೆ: ಗರ್ಭಿಣಿಯರ ಅನುಕೂಲಕ್ಕಾಗಿ ನೂತನ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರ್ವಜನಿಕ ಆಸ್ಪತ್ರೆಯನ್ನು ಮತ್ತಷ್ಟು ಆಧುನೀಕರಣಗೊಳಿಸಲಾಗುತ್ತಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ನೂತನ ಸುಸಜ್ಜಿತ ಆಂಬುಲೆನ್ಸ್ ಅನ್ನು ಗರ್ಭಿಣಿಯರ ಉಪಯೋಗಕ್ಕಾಗಿ ಚಾಲನೆ ನೀಡಿ ಮಾತನಾಡಿದರು.
ಆಸ್ಪತ್ರೆಗೆ ಅಗತ್ಯ ಇರುವ ಮೂಲ ಸೌಕರ್ಯ ಹಾಗೂ ಖಾಲೀ ಇರುವ ವೈದ್ಯರನ್ನು ಸದ್ಯದಲ್ಲಿಯೇ ಭರ್ತಿ ಮಾಡಲಾಗುವುದು ಎಂದರು.
ಕೇವಲ ಜಿಲ್ಲಾ ಆಸ್ಪತ್ರೆಗೆ ಸೀಮಿತ ಇದ್ದ ಡಯಾಲಿಸಿಸ್ ವ್ಯವಸ್ಥೆ ಕೇಂದ್ರವನ್ನು ತರೀಕೆರೆ ಸಾರ್ವಜನಿಕ ಆಸ್ಪತ್ರೆಗೆ ಮಂಜೂರು ಮಾಡಿಸಲಾಗಿದ್ದು ಸದ್ಯದಲ್ಲಿಯೇ ರೋಗಿಗಳಿಗೆ ಈ ಸೌಲಭ್ಯ ದೊರೆಯಲಿದೆ ಎಂದರು.
ಆಸ್ಪತ್ರೆಯಲ್ಲಿನ ರೋಗಿಗಳಿಗೆ ಮತ್ತು ಅವರ ಜೊತೆ ಬರುವವರಿಗೆ ಊಟದ ವ್ಯವಸ್ಥೆ ಮಾಡಲು ಅಗತ್ಯ ಇರುವ ಕೊಠಡಿಗೆ ಶಾಸಕರ ನಿಧಿಯಿಂದ 3 ಲಕ್ಷ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಡಾ.ದೇವರಾಜ್, ಉಪವಿಭಾಗಾಧಿಕಾರಿ ಜಿ.ಅನುರಾಧಾ, ಸಿಡಿಪಿಒ ಶ್ರೀಧರ್, ವೈದ್ಯಾಧಿಕಾರಿ ಮಲ್ಲಿಕಾರ್ಜನಪ್ಪ, ಡಾ.ಶಿವಮೂರ್ತಿ, ಡಾ.ರವಿಕೀರ್ತಿ, ಮುಖಂಡರಾದ ರವಿಶಾನುಭೋಗ್, ಹೇಮಲತಾ, ಫಾರೂಕ್, ಪುರಸಭೆ ಸದಸ್ಯ ಪದ್ಮರಾಜ್ ಇದ್ದರು.