ಬೆಂಗಳೂರು: ‘ಈ ನೆಲದ ತಲ್ಲಣಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೇ ಇದ್ದರೆ ಸಾಹಿತಿಯಾಗಲು ಸಾಧ್ಯವಿಲ್ಲ’ ಎಂದು ಹಿರಿಯ ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಹೇಳಿದರು.
‘ಟೋಟೋ ಫಂಡ್ಸ್ ದಿ ಆರ್ಟ್ಸ್’ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ ‘ನಮ್ಮ ಕಾಲದ ಬರಹ‘ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಎಲ್ಲಾ ಪಂಥಗಳಿಂದ ಹೊರಗುಳಿದಾಗಲೇ ಸೃಜನಶೀಲತೆಯು ಪಡಿಮೂಡುತ್ತದೆ. ಹಾಗಾಗಿ ಸತತ ಓದು ಮತ್ತು ಬರವಣಿಗೆಯ ಮೂಲಕವೇ ಅಸ್ತಿತ್ವ ಕಾಯ್ದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಕವಿ ಎಸ್.ಮಂಜುನಾಥ, ‘ನನ್ನ ಸಹಪಾಠಿಯನ್ನು ಹಂಗಿಸುವುದಕ್ಕಾಗಿಯೇ 7ನೇ ತರಗತಿಯಲ್ಲಿ ಕವಿತೆ ಬರೆದೆ. ಅದಕ್ಕಾಗಿ ಶಿಕ್ಷಕರಿಂದ ಪೆಟ್ಟು, ಬೈಗುಳ ತಿಂದೆ. ಕವಿ ಆಗುವುದಲ್ಲ, ಅದೊಂದು ಸ್ಥಿತಿ’ ಎಂದು ಬಣ್ಣಿಸಿದರು.
ಕವಯತ್ರಿ ಅಕ್ಷತಾ ಹುಂಚದಕಟ್ಟೆ, ‘ಹೆಣ್ಣಿನ ತಲ್ಲಣಗಳನ್ನು ಚಿತ್ರಿಸುವುದರ ಜತೆಗೆ ಅವುಗಳಾಚೆಗೆ ಮುಕ್ತಗೊಳ್ಳುವ ಬಗ್ಗೆ ಸಮಕಾಲೀನ ಲೇಖಕಿಯರು ಮಿಡಿಯುತ್ತಿದ್ದಾರೆ’ ಎಂದು ತಿಳಿಸಿದರು.
ಕವಿ ಆರಿಫ್ರಾಜ, ‘ಜಾತಿ, ಧರ್ಮದಂತಹ ಸಂಕೀರ್ಣ ವ್ಯವಸ್ಥೆಯಿರುವ ಭಾರತದಂತಹ ದೇಶದಲ್ಲಿ ಕಾವ್ಯ ಸೃಷ್ಟಿಸಲು ವಸ್ತು ಕೊರತೆಯಾಗದು. ಆದರೆ, ಮನುಷ್ಯರ ನಡುವೆ ಇರುವ ಕಂದಕವನ್ನು ಕಾವ್ಯ ಕಟ್ಟುವ ಮೂಲಕವೇ ಮೀರುವ ಪ್ರಯತ್ನವನ್ನು ಮಾಡಬೇಕಿದೆ’ ಎಂದು ತಿಳಿಸಿದರು.
ಮಂಕಿ ಅಂಡ್ ಮಿ ಬ್ಯಾಂಡ್ (ಸಂಗೀತ) ಅಮೃತ್ರಾಜ್ ಸ್ಟೀಫನ್, ಪೂಜಾ ಜೈನ್ (ಛಾಯಾಚಿತ್ರ), ರೋಹನ್ ಕ್ಷತ್ರಿ (ಇಂಗ್ಲಿಷ್ ಸೃಜನಶೀಲ ಬರವಣಿಗೆ), ಪದ್ಮನಾಭ ಭಟ್ (ಕನ್ನಡ ಸೃಜನಶೀಲ ಬರವಣಿಗೆ) ಕಿಸ್ಲೆ ಹಾಗೂ ಪ್ರಿಯಾಂಕ ಛಾಬ್ರಿಯಾ ( ಸಾಕ್ಷ್ಯಚಿತ್ರ) ಅವರಿಗೆ ರಂಗಕರ್ಮಿ ಅರುಂಧತಿನಾಗ್ ಅವರು ‘ಟೋಟೋ’ ಪ್ರಶಸ್ತಿ ಪ್ರದಾನ ಮಾಡಿದರು.