ಸಾಗರ: ಯಾವುದೇ ಜನಾಂಗದವರು ತಾವು ಹುಟ್ಟಿ ಬೆಳೆದ ಪ್ರದೇಶವನ್ನು ಮರೆಯದೆ ಆ ಭಾಗದ ಬೆಳವಣಿಗೆಗೆ ತಮ್ಮ ಕೈಲಾದ ನೆರವು ನೀಡಬೇಕು ಎಂದು ಶಿವಮೊಗ್ಗದ ವಿದ್ವಾನ್ ವಿ.ಎನ್. ಭಟ್ ಹೇಳಿದರು.
ಬೆಂಗಳೂರಿನ ಅಖಿಲ ಹವ್ಯಕ ಮಹಾಸಭಾ ಹಾಗೂ ಶಿವಮೊಗ್ಗ ಜಿಲ್ಲಾ ಹವ್ಯಕ ಸಮನ್ವಯ ಸಮಿತಿ ಈಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹವ್ಯಕ ಸಮಾಜದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಿ ಅವರು ಮಾತನಾಡಿದರು.
ಹವ್ಯಕ ಜನಾಂಗದ ವಿದ್ಯಾವಂತ ಯುವಕರು ನಗರ ಪ್ರದೇಶಗಳಿಗೆ ವಲಸೆ ಹೋಗುವುದು ಹೆಚ್ಚಾಗುತ್ತಿದ್ದು, ಈ ಕಾರಣ ಹಳ್ಳಿಗಳು ವೃದ್ಧಾಶ್ರಮಗಳಂತೆ ಕಾಣುತ್ತಿವೆ. ಎಲ್ಲಿಯೆ ಇದ್ದರೂ ಯುವಜನಾಂಗ ತಮ್ಮ ಮೂಲ ಸೆಲೆಯಿಂದ ದೂರಾಗಬಾರದು ಎಂದರು.
ಹವ್ಯಕರು ಮೂಲತಃ ಋಷಿ ಮತ್ತು ಕೃಷಿ ಸಂಸ್ಕೃತಿಯವರು. ವೇದ, ವಿದ್ಯೆ ಮತ್ತು ಕೃಷಿಯೆ ಈ ಜನಾಂಗದ ಜೀವಾಳವಾಗಿದೆ. ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಸಮಾಜದಲ್ಲಿ ಬೇರೂರುವಂತೆ ಮಾಡುವಲ್ಲಿ ಹವ್ಯಕರು ಮೊದಲಿನಿಂದಲೂ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಆರ್. ಜಯಂತ್ ಮಾತನಾಡಿ, ಪ್ರತಿಭೆ ಎಂಬುದು ಯಾರೊಬ್ಬರ ಸ್ವತ್ತು ಅಲ್ಲ. ಪ್ರತಿಭೆ ಹೊರ ಬರಲು ಸೂಕ್ತ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಇದೇ ಸಂದರ್ಭದಲ್ಲಿ ಹವ್ಯಕ ವಿದ್ಯಾನಿಧಿಗೆ ್ಙ ಒಂದು ಲಕ್ಷ ದೇಣಿಗೆ ನೀಡಿದ ಮಂಕಳಲೆ ದೇವಕಮ್ಮ ಅವರನ್ನು ಸನ್ಮಾನಿಸಲಾಯಿತು. ಲೇಖಕಿ ವಿಜಯಾ ಶ್ರೀಧರ್ ವಿಶೇಷ ಉಪನ್ಯಾಸ ನೀಡಿದರು.
ಕೆ.ಆರ್. ಶ್ರೀಧರ್ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿ. ಗೋಪಾಲಕೃಷ್ಣರಾವ್, ನರಹರಿ, ಮುಗಲೋಡಿ ಕೃಷ್ಣಮೂರ್ತಿ ಹಾಜರಿದ್ದರು. ಸರಸ್ವತಿ ಲಕ್ಷ್ಮಿನಾರಾಯಣ ಪ್ರಾರ್ಥಿಸಿದರು. ಈಳಿ ಶ್ರೀಧರ್ ಸ್ವಾಗತಿಸಿದರು. ತಿರುಮಲ ಮಾವಿನಕುಳಿ ನಿರೂಪಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.