ಬೆಂಗಳೂರು: ಮದ್ಯವ್ಯಸನಿಯಾಗಿದ್ದ ತಾಯಿಯ ವರ್ತನೆಯಿಂದ ಬೇಸರಗೊಂಡು ಅವರನ್ನು ಕೊಲೆ ಮಾಡಿದ್ದ ವೆಂಕಟೇಶ್ (20) ಎಂಬಾತನನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವೆಂಕಟೇಶ್, ತಾಯಿ ಜಯಮ್ಮ (42) ಮತ್ತು ಕುಟುಂಬದವರೊಂದಿಗೆ ದೇವನಹಳ್ಳಿ ತಾಲ್ಲೂಕಿನ ಬೈಚಾಪುರದಲ್ಲಿ ವಾಸವಿದ್ದ. ಮದ್ಯವ್ಯಸನಿಯಾಗಿದ್ದ ತಾಯಿ ಮನೆಯಲ್ಲಿ ಪದೇ ಪದೇ ಜಗಳ ಮಾಡುತ್ತಿದ್ದ ಕಾರಣಕ್ಕೆ ಆತ ಬೇಸರಗೊಂಡಿದ್ದ. ಸೆ.29ರ ರಾತ್ರಿ ಜಯಮ್ಮ ಅವರನ್ನು ಗ್ರಾಮದ ಸಮೀಪದ ಜೋಳದ ಹೊಲಕ್ಕೆ ಕರೆದುಕೊಂಡು ಹೋಗಿ ಇಟ್ಟಿಗೆಯಿಂದ ತಲೆಗೆ ಹೊಡೆದು, ನಂತರ ಸೀರೆಯ ಸೆರಗಿನಿಂದ ಉಸಿರು ಗಟ್ಟಿಸಿ ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದರು.
ಪಿಯುಸಿವರೆಗೆ ಓದಿರುವ ವೆಂಕಟೇಶ್ ಬೈಚಾಪುರದ ಖಾಸಗಿ ಕಂಪೆನಿಯೊಂದರಲ್ಲಿ ಸ್ಟೋರ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ. ಈ ಹಿಂದೆ ಗುಡಿಬಂಡೆ ಸಮೀಪದ ಯಲ್ಲೋಡ್ ಗ್ರಾಮದಲ್ಲಿ ವಾಸವಿದ್ದ ವೆಂಕಟೇಶ್ ಕುಟುಂಬ ಎರಡು ವರ್ಷಗಳ ಹಿಂದೆ ಬೈಚಾಪುರಕ್ಕೆ ಬಂದು ನೆಲೆಸಿತ್ತು.
ಪ್ರತಿನಿತ್ಯ ಮನೆಯಲ್ಲಿ ಜಗಳ ಮಾಡುತ್ತಿದ್ದ ಕಾರಣಕ್ಕೆ ತಾಯಿಯನ್ನು ಕೊಲೆ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆಯ ನಂತರ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದೇವನಹಳ್ಳಿಯ ಬಳಿ ಶನಿವಾರ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.