ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕಿನಲ್ಲಿ ಬರದ ಯಾತ್ರೆ ; ಎಪಿಎಂಸಿ ಸದಸ್ಯರಿಗೆ ಮೋಜಿನ ಯಾತ್ರೆ

Last Updated 4 ಜುಲೈ 2012, 10:10 IST
ಅಕ್ಷರ ಗಾತ್ರ

ಗಂಗಾವತಿ: ನೀರಾವರಿ ಗಂಗಾವತಿ, ಮಳೆಯಾಶ್ರಿತ ಕನಕಗಿರಿ ಕ್ಷೇತ್ರದಲ್ಲಿ ಈ ಬಾರಿ ಮಳೆಯ ಕೊರತೆಯಿಂದಾಗಿ ಇತ್ತ ರೈತ, ಮೇವು, ನೀರಿಲ್ಲದೆ ಅತ್ತ ಜನ-ಜಾನುವಾರು ಸಂಕಷ್ಟದಲ್ಲಿದ್ದರೆ, ಎಪಿಎಂಸಿ ಸದಸ್ಯರು `ಅಧ್ಯಯನ~ ನೆಪದ ಮೋಜಿನ ಉತ್ತರ ಭಾರತ ಪ್ರವಾಸ ಬುಧವಾರದಿಂದ ಕೈಗೊಂಡಿದ್ದಾರೆ.

ತಾಲ್ಲೂಕಿನಲ್ಲಿ ಬರ ಬಿದ್ದು ರೈತ ಜನ-ಜಾನುವಾರು ಪರದಾಡುತ್ತಿದ್ದರೆ, ರೈತರ ಹಣದಲ್ಲಿ ಮೋಜು ಮಾಡುವ ಜರೂರು ಏನಿತ್ತು..? ಕೃಷಿ ಸಂಧಿಗ್ಧತೆಯಲ್ಲಿದ್ದಾಗ ರೈತರ ಸಮಸ್ಯೆಗೆ ಸ್ಪಂದಿಸಬೇಕಾದ ಎಪಿಎಂಸಿ ಸದಸ್ಯರು ಮೋಜು ಮಾಡುವುದು ಎಷ್ಟು ಸರಿ ಎಂಬ ಆಕ್ರೋಶ ವ್ಯಕ್ತವಾಗಿದೆ.

ಲಕ್ಷ ಲಕ್ಷ ಹಣ ಪೋಲು: ಗಂಗಾವತಿ ಎಪಿಎಂಸಿಯಿಂದ ಜುಲೈ 4ರಿಂದ 13ರವರೆಗೆ 12 ಸದಸ್ಯರಿಗೆ ಉತ್ತರ ಭಾರತದ ಜಮ್ಮು-ಕಾಶ್ಮೀರ, ಪಂಜಾಬ, ಅಮೃತಸರ, ದೆಹಲಿ, ಚಂಢಿ ೀಗಡ, ಹರಿದ್ವಾರ, ಆಗ್ರಾ, ಜೈಪುರ, ರಾಜಸ್ತಾನ ಮೊದಲಾದ ಸ್ಥಳಗಳಲ್ಲಿ 10 ದಿನದ ಯಾತ್ರೆ ಆಯೋಜಿಸಲಾಗಿದೆ.

ಒಬ್ಬೊಬ್ಬ ಸದಸ್ಯರಿಗೆ ಕೇವಲ 41 ಸಾವಿರ ಹಣ ವ್ಯೆಯಿಸುತ್ತಿರುವುದಾಗಿ ಎಪಿಎಂಸಿ ಅಧಿಕಾರಿಕ ಮೂಲಗಳು ತಿಳಿಸುತ್ತಿವೆ. ಆದರೆ ವಿಮಾನಯಾನ, ಎಸಿ ವಸತಿ ಗೃಹ, ಭೂರಿಭೋಜನ, ಯಾತ್ರಾ ಸ್ಥಳಗಳ ವೀಕ್ಷಣೆಯ ವಾಹನ ವ್ಯವಸ್ಥೆಗೆ ಲಕ್ಷಾಂತರ ರೂಪಾಯಿ ವ್ಯೆಯಿಸಲಾಗುತ್ತಿದೆ.

ಅಧ್ಯಯನ ಎಂಬ ನೆಪ: ಹೊರ ರಾಜ್ಯಗಳಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಅಧ್ಯಯನ ಮಾಡುವುದು, ಅಲ್ಲಿ ಅಳವಡಿಸಿದ ತಾಂತ್ರಿಕತೆಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಅಳವಡಿಸಿಕೊಂಡು ಅಭಿವೃದ್ಧಿ ಹೊಂದಲು ಸದಸ್ಯರಿಗೆ ಉತ್ತರ ಭಾರತದ ಯಾತ್ರೆ ಆಯೋಜಿಸಲಾಗಿದೆ ಎನ್ನಲಾಗಿದೆ. 

ಆದರೆ ಸದಸ್ಯರು ಸಂಚರಿಸುತ್ತಿರುವುದು ಮಾತ್ರ ಬಹುತೇಕ ಯಾತ್ರಾ ಮತ್ತು ಪ್ರಸಿದ್ಧಿ ಪಡೆದ ಸ್ಥಳಗಳಲ್ಲಿ. ಕಾಟಾಚಾರಕ್ಕೆ ಎಂಬಂತೆ ಅಲ್ಲಿಲ್ಲಿ ಮೂರು ಎಪಿಎಂಸಿ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಧ್ಯಯನ ನೆಪದಲ್ಲಿ ಸದಸ್ಯರ ಸ್ವಕಾರ್ಯ, ಸ್ವಾಮಿ ಕಾರ್ಯ ನಡೆಯುತ್ತಿದೆ.

`ಎಪಿಎಂಸಿಯ ಈಗಿನ ಆಡಳಿತ ಮಂಡಳಿಯ ಎಲ್ಲ ಸದಸ್ಯರು ರೈತರಿಂದ ಆಯ್ಕೆಯಾಗದೇ ರಾಜಕಾರಣಿಗಳಿಂದ ನಾಮ ನಿರ್ದೇಶನಗೊಂಡವರು. ಇಂತವರಿಗೆ ರೈತರ ಪರವಾದ ಕಳಕಳಿಯಾದರೂ ಏನಿದ್ದೀತು~ ಎಂದು ರೈತರಾದ ಹೇಮಂತ, ಸುಂದರರಾಜ, ಕೋವಲನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಹಿಂದಿನ ಅಧ್ಯಯನ ಎಲ್ಲಿ?: ಅಧ್ಯಯನ ವಿಷಯವಾಗಿ ಎಪಿಎಂಸಿ ಸದಸ್ಯರು ಯಾತ್ರೆ ಮಾಡುವುದು ತಪ್ಪಲ್ಲ. ಆದರೆ ಪ್ರವಾಸದ ಸಮಯ, ಸಂದರ್ಭ, ಆಯ್ಕೆ ಮಾಡಿದ ರಾಜ್ಯದ ಎಪಿಎಂಸಿಗಳು ಯಾವ ಸಾಧನೆ ತೋರಿವೆ ಎಂಬ ಸಮೀಕ್ಷೆಯ ಮೂಲದಿಂದ ಯಾತ್ರೆ ಆಯೋಜನೆಗೊಂಡಿಲ್ಲ.

ಕಳೆದ ಅವಧಿಯಲ್ಲಿ ಎಪಿಎಂಸಿ ಸದಸ್ಯರಿಗೆ ಸುಮಾರು 20 ಲಕ್ಷಕ್ಕೂ ಅಧಿಕ ಹಣ ವ್ಯೆಯಿಸಿ ವಿದೇಶಿ   ಯಾತ್ರೆ ಮಾಡಿಸಲಾಯಿತು. ಆದರೆ ಹೋಗಿ ಬಂದವರು ಸ್ಥಳೀಯ ಮಾರುಕಟ್ಟೆಯಲ್ಲಿ ಯಾವ ಬದಲಾವಣೆ ತಂದರು?. ಯಾವ ಶಿಫಾರಸ್ಸು ಮಾಡಿದರು? ಎಂಬ ವರದಿ ಇಂದಿಗೂ ಬಹಿರಂಗವಾಗಿಲ್ಲ.

ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಎಪಿಎಂಸಿ ಮತ್ತೀಗ ಲಕ್ಷಾಂತರ ರೂಪಾಯಿ ಹಣ ವ್ಯೆಯಿಸಿ 14 ಸದಸ್ಯರಲ್ಲಿ 12 ಜನರಿಗೆ ಉತ್ತರ ಭಾರತ ಯಾತ್ರೆಗೆ ಕಳುಹಿಸಿರುವುದು ಎಷ್ಟು ಸರಿ ಎಂಬ ಚರ್ಚೆ ಸಾರ್ವಜನಿಕರಲ್ಲಿದೆ. ಅದಕ್ಕೆ ಎಪಿಎಂಸಿಯೇ     ಉತ್ತರಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT