ತಾಳಿಕೋಟೆ: ಪಟ್ಟಣದಲ್ಲಿ ಇತ್ತೀಚೆಗೆ ಡೆಂಗೆ ಶಂಕಿತ ರೋಗಿಗಳು, ಚಿಕುನ್ ಗುನ್ಯ ಹಾಗೂ ಮಲೇರಿಯಾ ಪೀಡಿತ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಸಾಮಾನ್ಯ ಜನತೆ ತತ್ತರಿಸುವಂತಾಗಿದೆ.
ಪಟ್ಟಣದ ಕೈಲಾಸ ಪೇಟೆಯ ಪ್ರವಚನಕಾರ ಬಸವಪ್ರಭುದೇವರ ಇಡಿ ಕುಟುಂಬ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು ಅವರ ಮಡದಿ ಅಕ್ಕಮಹಾದೇವಿ (56) ಶುಕ್ರವಾರ ಸೋಲಾಪುರ ಆಸ್ಪತ್ರೆಯಲ್ಲಿ ಮೃತರಾದರು. ಸಾವಿಗೆ ಡೆಂಗೆ ಜ್ವರವೇ ಕಾರಣವೇ ಎಂಬುದು ದೃಢಪಟ್ಟಿಲ್ಲ.
ಮಗ ಕುಮಾರೇಶ ವಿಜಾಪುರ ಬಿಎಲ್ಡಿಎನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರ ಇಬ್ಬರು ಹೆಣ್ಣುಮಕ್ಕಳಾದ ಉಮಾ, ಸುಮನಾ, ಮೊಮ್ಮಕ್ಕಳಾದ ಗುರುಪ್ರಸಾದ ಅಶ್ವಿನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಸ್.ಕೆ. ನಗರದ ಸಚಿನ ಚಿತ್ತರಗಿ ಡೆಂಗೆ ಪೀಡಿತರಾಗಿದ್ದು ಬಾಗಲಕೋಟೆಯ ಶಾಂತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇದೇ ಕುಟುಂಬದ ಸಂದೀಪ ಚಿತ್ತರಗಿ ರಕ್ಷಿತಾ ಚಿತ್ತರಗಿ ಸಹ ಚಿಕಿತ್ಸೆ ಪಡೆಯುತ್ತಿದ್ದು ಡೆಂಗೆ ಅಲ್ಲವೆಂದು ವೈದ್ಯರು ಹೇಳಿದ್ದಾರೆ.
ಪಟ್ಟಣದಲ್ಲಿ ಹೆಚ್ಚುತ್ತಿರುವ ಇಂತಹ ಪ್ರಕರಣಗಳಲ್ಲಿ ರೋಗಿಗಳ ಕುಟುಂಬಗಳು ಸರಕಾರಿ ಆಸ್ಪತ್ರೆಗೆ ದಾಖಲಾಗದೇ ಖಾಸಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಡೆಂಗೆ ಶಂಕಿತ ಪ್ರಕರಣಗಳ ವಿವರ ಲಭ್ಯವಿಲ್ಲವೆಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಲಕ್ಕಣ್ಣವರ ತಿಳಿಸಿದ್ದಾರೆ.
ಪಟ್ಟಣದಲ್ಲಿ ಇರುವ ರಕ್ತತಪಾಸಣೆ ಕೇಂದ್ರಗಳಲ್ಲಿ ಡೆಂಗೆ ರೋಗ ಲಕ್ಷಣಗಳನ್ನು ಪತ್ತೆ ಹಚ್ಚುವ ತಂತ್ರಜ್ಞಾನವಿಲ್ಲ. ಅದಕ್ಕೆ ಎಲಿಜಾ ಪರೀಕ್ಷೆ ಮಾಡಬೇಕಾಗುತ್ತದೆ. ರಕ್ತದಲ್ಲಿ ಪ್ಲೇಟ್ಲೆಟ್ಸ್ ಕಡಿಮೆಯಾದವರನ್ನೆಲ್ಲ ಡೆಂಗೆ ಪೀಡಿತರು ಎನ್ನಲಾಗದು. ಈ ಬಗ್ಗೆ ಖಚಿತ ಮಾಹಿತಿ ದೊರೆತರೆ ಇಲ್ಲವೇ ಶಂಕಿತ ರೋಗಿಗಳ ಬಗ್ಗೆ ವಿವರ ನೀಡಿದರೆ ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಹಗರಗುಂಡದಲ್ಲಿ ಡೆಂಗೆ ಶಂಕಿತರು ಹೆಚ್ಚುತ್ತಿರುವ ಬಗ್ಗೆ ಮಾಹಿತಿ ನೀಡಿದಾಗ ನಾಳೆ ಅಲ್ಲಿಗೆ ತಮ್ಮ ತಂಡವನ್ನು ಕಳಿಸುವುದಾಗಿ ಹೇಳಿದರು.