ಮುಂಡರಗಿ: `ರಾಜ್ಯದಲ್ಲಿ ತಾಳೆ ಬೆಳೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ 36 ಕೋಟಿ ಹಾಗೂ ರಾಜ್ಯ ಸರಕಾರ 6 ಕೋಟಿ ರೂಪಾಯಿ ಹಣವನ್ನು ತೆಗೆದಿರಿಸಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು ಐದು ತಾಳೆ ಎಣ್ಣೆ ಘಟಕಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು~ ಎಂದು ತೋಟಗಾರಿಕೆ ಮತ್ತು ಸಕ್ಕರೆ ಸಚಿವ ಎಸ್.ಎ. ರವೀಂದ್ರನಾಥ ಹೇಳಿದರು.
ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಫುಡ್, ಫ್ಯಾಟ್ ಆ್ಯಂಡ್ ಫರ್ಟಲೈಜರ್ಸ್ ಲಿಮಿಟೆಡ್ ಸಂಯುಕ್ತವಾಗಿ ತಾಲ್ಲೂಕಿನ ನಾಗರಹಳ್ಳಿ ಗ್ರಾಮದ ಈಶ್ವರಪ್ಪ ಹಂಚಿನಾಳ ಅವರ ತೋಟದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಾಂತೀಯ ತಾಳೆ ಬೆಳೆ ಅಭಿವೃದ್ಧಿ ತಾಂತ್ರಿಕ ಕಾರ್ಯಾಗಾರವನ್ನು ಉದ್ಘಾ ಟಿಸಿ ಅವರು ಮಾತನಾಡಿದರು.
`ತೋಟಗಾರಿಕೆ ಅಭಿವೃದ್ಧಿ ಹಿನ್ನೆಲೆಯಲ್ಲಿ ಕಳೆದ ವರ್ಷ ರಾಜ್ಯದ 20ಜನ ರೈತರನ್ನು ಮಲೇಷಿಯಾ ಹಾಗೂ ಮತ್ತಿತರ ದೇಶಗಳಿಗೆ ಕಳುಹಿಸಿ ಕೊಡಲಾಗಿತ್ತು. ತೋಟಗಾರಿಕೆ ಅಧ್ಯಯ ನಕ್ಕಾಗಿ ಪ್ರಸ್ತುತ ವರ್ಷ ತೋಟಗಾರಿಕೆ ಇಲಾಖೆಯು 100 ಜನ ರೈತರನ್ನು ವಿದೇಶಕ್ಕೆ ಕಳುಹಿಸಿಕೊಡಲು ಉದ್ದೇಶಿ ಸಲಾಗಿದೆ~ ಎಂದು ಅವರು ತಿಳಿಸಿದರು.
`ಇತ್ತೀಚಿನ ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ನಷ್ಟದ ಪ್ರಮಾಣ ಹೆಚ್ಚುತ್ತಿ ರುವುದರಿಂದ ರೈತರು ಕೃಷಿಯಿಂದ ಹಿಂದೆ ಸರಿಯತೊಡಗಿದ್ದಾರೆ. ಕೃಷಿಯಲ್ಲಿ ನಷ್ಟದ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರಿಗೆ ವಿವಿಧ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದು ರೈತರು ಅವುಗಳ ಸದುಪಯೋಗ ಪಡೆ ದುಕೊಳ್ಳಬೇಕು~ ಎಂದು ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ಸಲಹೆ ನೀಡಿದರು.
`ಕೃಷಿಯಾಧಾರಿತ ಕೈಗಾರಿಕಾ ಘಟಕ ಗಳ ಸ್ಥಾಪನೆಗೆ ರಾಜ್ಯ ಸರಕಾರ ತಾಲ್ಲೂ ಕಿನ ಕೆಲವು ಗ್ರಾಮಗಳ ಜಮೀ ನನ್ನು ವಶಪಡಿಸಿಕೊಳ್ಳಲು ಮುಂದಾಗಿ ರುವುದಾಗಿ ತಿಳಿದು ಬಂದಿದ್ದು, ತಾಲ್ಲೂಕಿ ನಲ್ಲಿ ತಾಳೆ ಎಣ್ಣೆ ಘಟಕ ಸ್ಥಾಪನೆಗೆ ಸರಕಾರ ಮುಂದಾದರೆ ಅದಕ್ಕೆ ಬೇಕಾ ಗುವ ಜಮೀನನ್ನು ನೀಡಲು ಈ ಭಾಗದ ರೈತರು ಸಿದ್ಧರಿದ್ದಾರೆ~ ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಭರವಸೆ ನೀಡಿದರು.
`ತಾಳೆ ಬೆಳೆ ಬೆಳೆಯಲು ಬಡ ರೈತರಿಗೆ ಬ್ಯಾಂಕುಗಳಲ್ಲಿ ಸಾಲ ದೊರೆಯದೆ ಇರುವುದರಿಂದ ರೈತರಿಗೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಸರಕಾರ ತಾಳೆ ಬೆಳೆಯುವ ರೈತರಿಗೆ ಸಾಲ ನೀಡು ವಂತೆ ಬ್ಯಾಂಕುಗಳಿಗೆ ಆದೇಶ ನೀಡಬೇಕು~ ಎಂದು ಜಿ.ಪಂ.ಸದಸ್ಯ ಹೇಮಗಿರಿಶ ಹಾವಿನಾಳ ಮನವಿ ಮಾಡಿದರು.
ಶಾಸಕ ರಾಮಣ್ಣ ಲಮಾಣಿ ಸಮಾರಂಭದ ಅಧ್ಯಕ್ಷತೆ ವಹಿಸಿ ಕೊಂಡಿದ್ದರು. ಜಿ.ಪಂ.ಅಧ್ಯಕ್ಷೆ ಚಂಬವ್ವ ಪಾಟೀಲ, ಉಪಾಧ್ಯಕ್ಷ ಬೀರಪ್ಪ ಬಂಡಿ, ರೈತ ಮುಖಂಡ ಈಶ್ವರಪ್ಪ ಹಂಚಿನಾಳ, ಅಶೋಕ, ಹೇಮಂತಗೌಡ ಪಾಟೀಲ ಮೊದಲಾದವರು ಮಾತನಾಡಿದರು. ಶಿವಕು ಮಾರಗೌಡ ಪಾಟೀಲ, ಸುನಿತಾ ಹಳ್ಳೆಪ್ಪ ನವರ, ಪಿ.ಎಂ.ಪಾಟೀಲ, ಆರ್ .ಬಿ.ಬಸರಡ್ಡೆರ, ಸಿ.ಸಿ.ಸಣ್ಣಗೌಡರ ಮೊದಲಾದವರು ಹಾಜರಿದ್ದರು. ಸಿ.ಕೆ.ಮೇದಪ್ಪ ಸ್ವಾಗತಿಸಿದರು. ಡಾ. ಡಿ.ಎಲ್.ಮಹೇಶ್ವರ ಪ್ರಾಸ್ತಾ ವಿಕವಾಗಿ ಮಾತನಾಡಿದರು. ನಿಂಗು ಸೊಲಗಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.