ಸಾಲಿಗ್ರಾಮ: ತೆಂಗಿನ ಕಾಯಿಗೆ ಸಮರ್ಪಕ ಬೆಲೆ ಸಿಗದೆ ರೈತರು ನಷ್ಟ ಅನುಭವಿಸುತ್ತಿದ್ದು, ಇದನ್ನು ತಪ್ಪಿಸದಿದ್ದರೆ ತೆಂಗಿನ ಕಾಯಿ ಮಾರಾಟ ಮಾಡುವುದಿಲ್ಲ ಎಂದು ರೈತರು ಪಟ್ಟು ಹಿಡಿದು ಧರಣಿ ನಡೆಸಿದ ಪ್ರಸಂಗ ಇಲ್ಲಿನ ಎಪಿಎಂಸಿ ಉಪ ಮಾರುಕಟ್ಟೆಯ ಪ್ರಾಂಗಣದಲ್ಲಿ ಶನಿವಾರ ನಡೆಯಿತು.
ಮನೆಯ ಮುಂದೆ ಬಂದು ಖರೀದಿ ಮಾಡಿದರೆ ಕೆ.ಜಿ.ಗೆ ರೂ.14 ನೀಡುತ್ತಾರೆ. ನಾವೇ ಮಾರುಕಟ್ಟೆಗೆ ತಂದರೆ ಪ್ರತಿ ಕೆ.ಜಿ.ಗೆ ರೂ. 12 ನೀಡಿ ಎಂದು ಮಧ್ಯವರ್ತಿಗಳು ಕಿರುಕುಳ ನೀಡಿತ್ತಾರೆ ಎಂದು ರೈತರು ದೂರಿದರು.
ಕಳೆದ ಎರಡು ವರ್ಷಗಳಿಂದ ವಹಿವಾಟು ಉತ್ತಮವಾಗಿ ನಡೆಯುತ್ತಿದೆ. ಚುಂಚನಕಟ್ಟೆ, ಭೇರ್ಯ, ಮಿರ್ಲೆ ಹೋಬಳಿ ವ್ಯಾಪ್ತಿಯ ಬಹುತೇಕ ರೈತರು ಶನಿವಾರ ಬೆಳಗಿನ ಜಾವ ಎತ್ತಿನಗಾಡಿ ಸೈಕಲ್ ಹಾಗೂ ತಳ್ಳುವಗಾಡಿಯ ಮೂಲಕ ತಾವು ಬೆಳೆದ ತೆಂಗಿನಕಾಯಿ ಇಲ್ಲಿಗೆ ತಂದು ಮಾರು ತ್ತ್ದ್ದಿದೇವೆ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಅನ್ಯಾಯಕ್ಕೆ ಒಳಗಾಗಿದ್ದೇವೆ ಎಂದು ರೈತರು ಕಿಡಿಕಾರಿದರು.
ಶನಿವಾರ ರೈತರು ಮಾರಾಟಕ್ಕೆ ತಂದಿದ್ದ ತೆಂಗಿನ ಕಾಯಿಗಳನ್ನು ಮಧ್ಯವರ್ತಿಗಳ ಮೂಲಕ ಮಾರಾಟ ಮಾಡಲು ನಿರಾಕರಿಸಿ ದಿಢೀರ್ ಎಂದು ಧರಣಿ ನಡೆಸಿದರು. ಎಪಿಎಂಸಿ ನಿರ್ದೇಶಕ ಕುಪ್ಪಳ್ಳಿ ಸೋಮು, ಗ್ರಾಪಂ. ಸದಸ್ಯ ಸಾ.ರಾ. ಗುರುಪ್ರಸಾದ್, ಸಾ.ರಾ. ಸತೀಶ್ ಸ್ಥಳಕ್ಕೆ ಆಗಮಿಸಿ ರೈತರನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸಲಾಗುತ್ತದೆ ಎಂದು ಕುಪ್ಪಳ್ಳಿ ಸೋಮು ಭರವಸೆ ನಂತರು ವಹಿವಾಟು ನಡೆಸಲು ರೈತರು ಸಮ್ಮತಿಸಿದರು.