ಮನಿಲಾ (ಎಎಫ್ಪಿ): ದಕ್ಷಿಣ ಸುಡಾನ್ನಲ್ಲಿನ ಹಿಂಸಾಚಾರ ಕೊನೆಗೊಳಿಸುವಂತೆ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಕರೆ ನೀಡಿದ್ದಾರೆ.
ಫಿಲಿಪ್ಪೀನ್ಸ್ಗೆ ಎರಡು ದಿನಗಳ ಭೇಟಿ ನೀಡಿರುವ ಮೂನ್, ಭಾನುವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಹಿಂಸಾಚಾರದಿಂದ ಸಾವಿರಾರು ಜನರು ತೊಂದರೆಗೆ ಒಳಗಾಗಿದ್ದಾರೆ ಎಂದು ತಿಳಿಸಿದರು.
ದ್ವೇಷ ನಿಲ್ಲಿಸಿ, ನಾಗರಿಕರ ಮೇಲಿನ ಹಿಂಸೆಯನ್ನು ಅಂತ್ಯಗೊಳಿಸುವಂತೆ ಎಲ್ಲ ರಾಜಕಾರಣಿಗಳು, ಸೇನೆ ಹಾಗೂ ಉಗ್ರಗಾಮಿ ನಾಯಕರನ್ನು ಒತ್ತಾಯಿಸುವುದಾಗಿ ಅವರು ಹೇಳಿದರು.
ಬಿಕ್ಕಟ್ಟಿನಿಂದ ಹೊರಬರಲು ರಾಜಕೀಯ ಮಾರ್ಗೋಪಾಯ ಕಂಡುಕೊಳ್ಳುವಂತೆ ಹಾಗೂ ತಮ್ಮ ಬೆಂಬಲಿಗರಿಗೆ ಶಸ್ತ್ರಾಸ್ತ್ರ ಕೆಳಗಿಡಲು ಆದೇಶಿಸುವಂತೆ ದಕ್ಷಿಣ ಸುಡಾನ್ ಅಧ್ಯಕ್ಷ ಸಾಲ್ವಾ ಕೀರ್ ಮತ್ತು ಅವರ ಪ್ರತಿರೋಧಿ ವಜಾಗೊಂಡ ಉಪಾಧ್ಯಕ್ಷ ರೀಕ್ ಮಾಚಾರ್ ಅವರನ್ನು ಮೂನ್ ಆಗ್ರಹಿಸಿದರು.
ತಮ್ಮ ಬೆಂಬಲಿಗರು ಕೇಳುವಂತಹ ಸ್ಪಷ್ಟ ಮತ್ತು ಪರಿಣಾಮಕಾರಿ ಸಂದೇಶವನ್ನು ರವಾನೆ ಮಾಡಲು ಇಬ್ಬರೂ ನಾಯಕರು ಎಲ್ಲ ಅಧಿಕಾರ ಬಳಸುವಂತೆ ಅವರು ಸೂಚಿಸಿದರು.
‘ನಿರಂತರವಾದ ಹಿಂಸಾಚಾರವು ಜನಾಂಗೀಯ ಅಥವಾ ಇತರ ಯಾವುದಿದ್ದರೂ, ಅದು ಸಂಪೂರ್ಣ ಅಸಮರ್ಥನೀಯ ಮತ್ತು ಈ ಚಿಕ್ಕ ರಾಷ್ಟ್ರದ ಭವಿಷ್ಯಕ್ಕೆ ಭಯಾನಕ ಬೆದರಿಕೆ ಒಡ್ಡುವುದು’ ಎಂದು ಅವರು ಎಚ್ಚರಿಸಿದರು.
ಈ ಮಧ್ಯೆ, ಶಾಂತಿಪಾಲನಾ ಪಡೆಯ ೪೩ ಭಾರತೀಯ ಯೋಧರು ಬಂಡುಕೋರರ ವಿರುದ್ಧ ಧೈರ್ಯದಿಂದ ಹೋರಾಡಿ ಹೆಚ್ಚಿನ ಸಾವು–ನೋವು ತಡೆದಿರುವುದಾಗಿ ವಿಶ್ವಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ಪ್ರಶಂಸಿಸಿದ್ದಾರೆ.
ದೇಶದಲ್ಲಿ ಸರ್ಕಾರದ ವಿರುದ್ಧ ದಂಗೆ ಎಬ್ಬಿಸಲು ಮಾಚಾರ್ ಯತ್ನಿಸಿದ್ದಾರೆ ಎಂದು ಕೀರ್ ಆರೋಪಿಸಿದ್ದಾರೆ. ಆದರೆ ಇದನ್ನು ಅಲ್ಲಗಳೆದಿರುವ ಬಂಡುಕೋರ ನಾಯಕ, ಅಧ್ಯಕ್ಷರೇ ರಕ್ತಪಾತಕ್ಕೆ ಕಾರಣರಾಗಿದ್ದಾರೆ ಎಂದು ದೂರಿದ್ದಾರೆ.
೨೦೧೧ರಲ್ಲಿ ಸ್ವಾತಂತ್ರ್ಯ ಪಡೆದ ತೈಲ ಶ್ರೀಮಂತಿಕೆಯ ದಕ್ಷಿಣ ಸುಡಾನ್ನಲ್ಲಿ ಅಂತಃಕಲಹಕ್ಕೆ ದಾರಿಯಾಗಿದೆ. ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಎರಡೂ ಕಡೆಯವರ ಘರ್ಷಣೆಯಲ್ಲಿ ಕನಿಷ್ಠ ೫೦೦ ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ವಿಶ್ವಸಂಸ್ಥೆ ಶಿಬಿರದಲ್ಲಿ ೪೦ ಸಾವಿರಕ್ಕೂ ಅಧಿಕ ನಾಗರಿಕರು ಆಶ್ರಯ ಪಡೆದಿದ್ದಾರೆ.
ಬಂಡುಕೋರರ ಗುಂಡಿಗೆ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಇಬ್ಬರು ಭಾರತೀಯ ಯೋಧರು ಬಲಿ ಆಗಿದ್ದು, ತನ್ನ ಪ್ರಜೆಗಳನ್ನು ತೆರವು ಮಾಡುತ್ತಿದ್ದ ಅಮೆರಿಕದ ವಿಮಾನವೊಂದು ದಾಳಿಯಿಂದ ಹಾನಿಗೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.