ಭಟ್ಕಳ: ಕಳೆದೊಂದು ವಾರದಿಂದ ಬಿಡುವು ನೀಡಿದ್ದ ಗಾಳಿ, ಮಳೆ ಬುಧವಾರ ಸಂಜೆ ದಿಢೀರ್ ಎಂದು ಬೀಸಿದ್ದರಿಂದ ಅರಬ್ಬಿ ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಾಗಿ ಮೀನುಗಾರಿಕೆ ದೋಣಿಗಳು ಹರಸಾಹ ಸಪಟ್ಟು ದಡಕ್ಕೆ ಆಗಮಿಸಿದವು.
ನಿನ್ನೆ ರಾತ್ರಿ ಸುರಿದ ಮಳೆ ಬೆಳಿಗ್ಗೆ ಬಿಟ್ಟುಬಿಟ್ಟು ಸುರಿಯುತ್ತಿತ್ತು. ಸಂಜೆ ಹೊತ್ತಿಗೆ ಗಾಳಿ, ಮಳೆಯ ಆರ್ಭಟ ಉಗ್ರರೂಪ ತಾಳಿತು. ಅರಬ್ಬಿ ಸಮುದ್ರದಲ್ಲಾದ ಬದಲಾವಣೆಯನ್ನು ಗಮನಿಸಿದ ಮೀನುಗಾರರು ದಡಕ್ಕೆ ಮರಳಿದರು.
ಬಂದರಿನ ಅಳಿವೆ (ನದಿ, ಸಮುದ್ರ ಸೇರುವ ಸ್ಥಳ) ಪ್ರದೇಶದಲ್ಲಿ ಒಂದರಹಿಂದೊಂದರಂತೆ ಬರುತ್ತಿರುವ ಅಲೆಗಳಿಂದ ದೋಣಿಗಳು ತೊಂದರೆ ಅಪಾಯವನ್ನು ಎದುರಿಸಬೇಕಾಯಿತು. ರಾತ್ರಿ 8ಗಂಟೆ ಸುಮಾರಿಗೆ ಎಲ್ಲ ದೋಣಿಗಳು ದಡಕ್ಕೆ ಮರಳಿದವು.
ಜಿಟಿಜಿಟಿಯಾಗಿ ಸುರಿಯುತ್ತಿರುವ ಮಳೆ ಮಧ್ಯೆಯೇ ಬಂದರಿನಲ್ಲಿ ವಹಿವಾಟು ನಡೆಯಿತು. ಮಳೆ, ಗಾಳಿಯಿಂದಾಗಿ 70 ದೋಣಿಗಳ ಪೈಕಿ ಬೆರಳೆಣಿಕೆ ಯಷ್ಟು ದೋಣಿಗಳು ಮಾತ್ರ ಮೀನು ತಂದಿದ್ದವು.
ಮೀನುಗಾರಿಕಾ ದೋಣಿ ಪಲ್ಟಿ; ಮೀನುಗಾರರು ಪಾರು
ಭಟ್ಕಳ: ಮೀನುಗಾರಿಕೆ ನಡೆಸಿ ಹಿಂತಿರುಗುತ್ತಿದ್ದ ಗಿಲ್ನೆಟ್ ಮೀನುಗಾರಿಕಾ ದೋಣಿಯೊಂದು ಯಾಂತ್ರಿಕ ದೋಷದಿಂದ ಮಗುಚಿ ಹಾನಿಗೀಡಾದ ಘಟನೆ ತಾಲ್ಲೂಕಿನ ಅರಬ್ಬೀ ಸಮುದ್ರದಲ್ಲಿ ಸೋಮವಾರ ಸಂಜೆ ನಡೆದಿದೆ.
ದೋಣಿಯಲ್ಲಿದ್ದ ದೇವರಾಜ ಮೊಗೇರ್, ವೆಂಕಟೇಶ ಮೊಗೇರ್ ಮತ್ತು ಶ್ರೀಧರ ಮೊಗೇರ್ ಎಂಬವರು ಈಜಿ ದಡಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಲ್ಲೂಕಿನ ಅಳ್ವೆಗದ್ದೆಯ ಕುಲ ದೇವತಾ ಹೆಸರಿನ ದೇವರಾಜ ಸುಕ್ರು ಮೊಗೇರ ಎಂಬವರಿಗೆ ಸೇರಿದ ಗಿಲ್ ನೆಟ್ ದೋಣಿ ದುರಂತಕ್ಕೀಡಾಗಿದ್ದು ದೋಣಿಯನ್ನು ಸಮುದ್ರದಿಂದ ದಡಕ್ಕೆ ತರಲು ಹೋದ ಹಡಗು ವಿಫಲ ಯತ್ನ ನಡೆಸಿ ವಾಪಸಾಗಿದೆ.
ನಂತರ ಇಲ್ಲಿನ ಹುಯಿಲ್ಮುಡಿ ಸಮುದ್ರತೀರದಲ್ಲಿ ಸಂಪೂರ್ಣ ಜಖಂ ಆದ ಸ್ಥಿತಿಯಲ್ಲಿ ದೋಣಿ ಪತ್ತೆಯಾಗಿದೆ. ದೋಣಿಯಲ್ಲಿದ್ದ ಬಲೆ ಸಮುದ್ರ ಪಾಲಾಗಿದೆ.