ಬೆಂಗಳೂರು (ಪಿಟಿಐ): ಪತ್ನಿಯ ಮೇಲೆ ಹಲ್ಲೆ ಹಾಗೂ ಕೊಲೆ ಬೆದರಿಕೆ ಆಪಾದನೆಯಡಿಯಲ್ಲಿ ಬಂಧಿತರಾದ ಕನ್ನಡ ಚಿತ್ರನಟ ದರ್ಶನ್ ಅವರ ಜಾಮೀನು ಕೋರಿಕೆ ಅರ್ಜಿಯನ್ನು ನ್ಯಾಯಾಲಯ ಮಂಗಳವಾರ ತಿರಸ್ಕರಿಸಿತು.
ಮೊದಲ ಅಡಿಷನಲ್ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವೆಂಕಟೇಶ ಹುಲಗಿ ಅವರು ಜಾಮೀನು ಕೋರಿಕೆ ಅರ್ಜಿಯನ್ನು ತಿರಸ್ಕರಿಸಿದರು.
ಸೆಪ್ಟೆಂಬರ್ 9ರಂದು ಪೊಲೀಸರು ದರ್ಶನ್ ಅವರನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿದ್ದರು. ಮ್ಯಾಜಿಸ್ಟ್ರೇಟ್ ಅವರು ದರ್ಶನ್ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು.
ದರ್ಶನ್ ಮತ್ತು ಪತ್ನಿ ಮಧ್ಯೆ ರಾಜಿಗಾಗಿ ಚಿತ್ರರಂಗದ ಹಲವಾರು ಪ್ರಮುಖರು ತೀವ್ರ ಯತ್ನ ನಡೆಸಿದ್ದರು. ದರ್ಶನ್ ವಿರುದ್ಧ ಹೂಡಲಾಗಿದ್ದ ಕೊಲೆಯತ್ನದ ಆಪಾದನೆಯನ್ನು (ಐಪಿಸಿ ಸೆಕ್ಷನ್ 307) ಕೈಬಿಡುವಂತೆ ಪೊಲೀಸರೂ ಸೋಮವಾರ ಮನವಿ ಮಾಡಿದ್ದರು.
ಕೊಲೆಯತ್ನದ ಆಪಾದನೆ (ಐಪಿಸಿ ಸೆಕ್ಷನ್ 307) ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಹುಲಗಿ ಅವರು ದರ್ಶನ್ ಜಾಮೀನು ಕೋರಿಕೆ ಅರ್ಜಿಯನ್ನು ತಿರಸ್ಕರಿಸಿದರು.