ಮೈಸೂರು: ದಸರಾ ಮಹೋತ್ಸವದಲ್ಲಿ ಭಾಗವಹಿಸುವ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ನೀಡುವ ಗೌರವಧನವನ್ನು ಈ ಬಾರಿ ರೂ. 25 ಲಕ್ಷ ಕ್ಕೆ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ.
ಕಳೆದ ವರ್ಷ ರೂ. 20 ಲಕ್ಷ ನೀಡಲಾಗಿತ್ತು. ಈ ಬಾರಿ ಯೂ ರೂ. 20 ಲಕ್ಷ ನೀಡಲು ದಸರಾ ಮಹೋತ್ಸವ ಸಮಿತಿ ನಿರ್ಧರಿಸಿತ್ತು. ‘ಆದರೆ ರಾಜ ವಂಶಸ್ಥರಾದ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಆರ್ಥಿಕವಾಗಿ ತೊಂದರೆಯಲ್ಲಿ ಇರುವುದರಿಂದ ಈ ಬಾರಿ ರೂ. 25 ಲಕ್ಷ ನೀಡಬೇಕೆಂದು ಅಂದುಕೊಂಡಿದ್ದೇವೆ. ಈ ಕುರಿತು ಸೆ. 20ರಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರೊಂದಿಗೆ ಚರ್ಚಿಸಿ ಪ್ರಕಟಿಸುತ್ತೇವೆ’ ಎಂದು ಜಿಲ್ಲಾ ಉಸ್ತು ವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ‘ಪ್ರಜಾವಾಣಿ’ಗೆ ದೂರವಾಣಿ ಮೂಲಕ ಗುರುವಾರ ತಿಳಿಸಿದರು.
‘ಸೆ. 20ರಂದು ಸಂಜೆ 3.50 ಗಂಟೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದಸರಾ ಮಹೋತ್ಸವಕ್ಕೆ ಅಧಿಕೃತವಾಗಿ ಆಹ್ವಾನಿಸ ಲಾಗುತ್ತದೆ. ರಾತ್ರಿ 9 ಗಂಟೆಗೆ ದಸರಾ ಮಹೋ ತ್ಸವ ಉದ್ಘಾಟಿಸಲು ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರನ್ನು ಆಹ್ವಾನಿಸಲಾಗುತ್ತದೆ. ಸೆ. 21ರಂದು ಬೆಳಿಗ್ಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಆಹ್ವಾನಿಸುತ್ತೇವೆ. ಈ ಸಂದರ್ಭದಲ್ಲಿ ಮೈಸೂರು ಪಾಲಿಕೆ ಮೇಯರ್ ಎನ್.ಎಂ. ರಾಜೇಶ್ವರಿ, ಜಿಲ್ಲಾಧಿಕಾರಿ ಸಿ. ಶಿಖಾ ಮೊದಲಾದವರು ಹಾಜರಿರುತ್ತಾರೆ’ ಎಂದು ಅವರು ಹೇಳಿದರು.