ಗೋಣಿಕೊಪ್ಪಲು: `ನಾಡಿನ ಸಂಸ್ಕೃತಿ ಉಳಿವಿಗೆ ದಸರಾ ಉತ್ಸವದಂತಹ ಕಾರ್ಯಕ್ರಮಗಳು ಸಹಕಾರಿ~ ಎಂದು ನಟಿ ಹರ್ಷಿಕಾ ಪೂಣಚ್ಚ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾವೇರಿ ದಸರಾ ಸಮಿತಿ ವತಿಯಿಂದ ಶನಿವಾರ ನಡೆದ ಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನರು ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಸಂಸ್ಕೃತಿ ಉಳಿಸಿ, ಬೆಳಸಬೇಕು ಎಂದು ಸಲಹೆ ನೀಡಿದರು.
ನಟ ಭುವನ್ ಪೂನ್ನಣ್ಣ ಮಾತನಾಡಿ, ಸಿನಿಮಾ ಲೋಕದ ಬಗ್ಗೆ ಜನತೆಯಲ್ಲಿ ತಪ್ಪು ಭಾವನೆಗಳಿವೆ. ಯಾವುದೇ ಕ್ಷೇತ್ರವನ್ನಾದರೂ ಹತ್ತಿರದಿಂದ ನೋಡುವ ಮೂಲಕ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಕಲಾಭಿಮಾನಿಗಳೇ ಸಿನಿಮಾ ಲೋಕದ ದೊಡ್ಡ ಸಂಪತ್ತು ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, 34 ಸ್ಥಳೀಯ ದಸರಾ ಉತ್ಸವ ಇಂದು ವಿಜೃಂಭಣೆಯಿಂದ ಜರುಗುತ್ತಿದೆ.
ಚಾಮುಂಡಿ ದೇವಿಯ ಆರಾಧನೆಗೆ ಆರಂಭಿಸಿದ ಉತ್ಸವ ಕಾಲ ಕ್ರಮೇಣ ಸಾಂಸ್ಕೃತಿಕ ಉತ್ಸವದ ಆಯಾಮ ಪಡೆದುಕೊಂಡದ್ದು ಸಂತಸದ ವಿಚಾರ ಎಂದು ಶ್ಲಾಘಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್.ಕುಶಾಲಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಅಧ್ಯಕ್ಷೆ ಅಡ್ಡಂಡ ಕಾರ್ಯಪ್ಪ, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಶ್ರೀಧರ್ ಮಾತನಾಡಿದರು.
ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಕುಲ್ಲಚಂಡ ಬೋಪಣ್ಣ, ಗ್ರಾಮ ಪಂಚಾಯಿತಿ ಸದಸ್ಯೆ ಪ್ರವಿ ಮೊಣ್ಣಪ್ಪ ಹಾಜರಿದ್ದರು. ದಸರಾ ಸಮಿತಿ ಅಧ್ಯಕ್ಷ ಸಿ.ಕೆ.ಬೋಪಣ್ಣ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬೋಜಮ್ಮ ಸ್ವಾಗತಿಸಿ, ಪ್ರಚಾರ ಸಮಿತಿ ಅಧ್ಯಕ್ಷ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ವಂದಿಸಿದರು.