ಮಹದೇವಪುರ: `ಮಾನವತ್ವದ ಮಹತ್ವಪೂರ್ಣ ಸಾರವನ್ನು ಜಗತ್ತಿಗೆ ಸಾರಿದ ಸಂತ ಕನಕದಾಸರ ಮಾರ್ಗದಲ್ಲಿ ಸಾಗಿದರೆ ಸಮಾಜದ ಅಶಾಂತಿ ತಾನಾಗಿಯೇ ದೂರವಾಗುತ್ತದೆ' ಎಂದು ರಾಜ್ಯ ಕುರುಬರ ಸಂಘದ ಖಜಾಂಚಿ ಆರ್.ರಾಮಕೃಷ್ಣಪ್ಪ ಅಭಿಪ್ರಾಯಪಟ್ಟರು.
ಇಲ್ಲಿನ ಸೊರಹುಣಸೆ ಗ್ರಾಮದಲ್ಲಿ ಶನಿವಾರ ನಡೆದ 525ನೇ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಬಿಬಿಎಂಪಿ ಸದಸ್ಯ ಎಸ್.ಉದಯಕುಮಾರ್ ಮಾತನಾಡಿ, `ಕನಕದಾಸರು ಕುರುಬ ಸಮುದಾಯಕ್ಕೆ ಮಾತ್ರ ಸೀಮಿತರಲ್ಲ. ಅವರು ನಾಡಿನ ಎಲ್ಲ ಸಮುದಾಯದವರ ಆಸ್ತಿ. ಅವರ ಸಂದೇಶಗಳು ಎಲ್ಲ ಸಮುದಾಯಕ್ಕೂ ಮೀಸಲಾಗಿವೆ' ಎಂದರು.
ಈ ಸಂದರ್ಭದಲ್ಲಿ ಯೋಗಗುರುಗಳಾದ ಲಕ್ಷ್ಮಣ ಹುಣಸಾಳ, ನಾಗಪ್ಪ, ಮುನಿರಾಜು ಮತ್ತು ಲಕ್ಷ್ಮಣಪ್ಪ ಅವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ವಿ.ಟಿ.ಬಿ. ಬಾಬು ರೆಡ್ಡಿ, ವೆಂಕಟೇಶ ರೆಡ್ಡಿ, ವಿ.ಸತೀಶಕುಮಾರ್, ಗೋಪಾಲ ರೆಡ್ಡಿ, ಎನ್.ಶ್ರೀನಿವಾಸ ರೆಡ್ಡಿ ಉಪಸ್ಥಿತರಿದ್ದರು. ಸ್ಥಳೀಯ ಸರ್ಕಾರಿ ಶಾಲಾ ಮಕ್ಕಳಿಗೆ ಕನಕದಾಸರ ಕೀರ್ತನ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.