ಕೃಷ್ಣರಾಜಪೇಟೆ: ಮಹಿಳೆಯರು ಬದುಕಿನಲ್ಲಿ ಸಮಸ್ಯೆಗಳಿಗೆ ಎದೆಗುಂದದೇ ಸಂಸಾರವನ್ನು ಸುಸೂತ್ರವಾಗಿ ತೂಗಿಸಿ ಕೊಂಡು ಹೋಗುವ ಕಡೆ ಮುನ್ನಡೆ ಯಬೇಕು ಎಂದು ಪಟ್ಟಣದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಜಿ. ನಂಜುಂಡಯ್ಯ ಸಲಹೆ ನೀಡಿದರು.
ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಹೋಬಳಿಯ ವಿವಿಧ ಸ್ತ್ರೀಪರ ಸಂಘಟನೆಗಳ ಕಾರ್ಯಕರ್ತರಿಗೆ ಮಂಗಳವಾರ ಏರ್ಪಡಿಸಿದ್ದ ಕೌಟುಂಬಿಕ ದೌರ್ಜನ್ಯಗಳಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ- 2005 ಕುರಿತ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಿಳಾ ಪರವಾಗಿರುವ ಕಾನೂನು ದುರ್ಬಳಕೆ ಆಗುತ್ತಿದೆ. ಮಹಿಳೆಯರು ಇಂತಹ ಪರಿಪಾಠ ಪ್ರೋತ್ಸಾಹಿಸದೇ ಕುಟುಂಬಗಳಲ್ಲಿನ ಸಣ್ಣಪುಟ್ಟ ಅಭಿಪ್ರಾಯಗಳನ್ನು ಸ್ಥಳದಲ್ಲಿಯೇ ಪರಿಹರಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕಿರಿಯ ಶ್ರೇಣಿ ನ್ಯಾಯಾಧೀಶ ಶ್ರೀಧರ್ ಮಾತನಾಡಿದರು. ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ರಾಮೇಗೌಡ, ಕಾರ್ಯದರ್ಶಿ ವಿ.ಎಸ್.ಧನಂಜಯ, ಉಪಾಧ್ಯಕ್ಷ ಕೆ.ಆರ್.ಮಹೇಶ್, ಕೌಟುಂಬಿಕ ದೌರ್ಜನ್ಯ ಕಾಯ್ದೆ ಸಲಹೆಗಾರ್ತಿ ಎಸ್.ಡಿ.ಸರೋಜಮ್ಮ, ಸ್ಥಳೀಯ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸಾತನೂರು ದೇವರಾಜ್ ಮತ್ತಿತರರು ಇದ್ದರು.