ನವದೆಹಲಿ (ಪಿಟಿಐ): ಸಂಸತ್ತಿನ ವಾಗ್ದಂಡನೆಯನ್ನು ಎದುರಿಸುತ್ತಿರುವ ಸಿಕ್ಕಿಂ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಅವರ ಮೇಲೆ ರಾಜ್ಯಸಭೆ ರಚಿಸಿದ ಸಮಿತಿಯು ಭ್ರಷ್ಟಾಚಾರ ಮತ್ತು ಅವ್ಯವಹಾರ ಸೇರಿದಂತೆ ಒಟ್ಟು 16 ಆರೋಪಗಳ ಪಟ್ಟಿಯನ್ನು ಹೊರಿಸಿದೆ.
ಸುಪ್ರಿಂ ಕೋರ್ಟ್ ನ್ಯಾಯಾಧೀಶ ಅಫ್ತಾಬ್ ಅಲಾಂ, ಕರ್ನಾಟಕ ಹೈಕೊರ್ಟ್ನ ಮುಖ್ಯ ನ್ಯಾಯಾಧೀಶ ಕೆ.ಎಸ್.ಕೇಹರ್ ಮತ್ತು ಖ್ಯಾತ ನ್ಯಾಯವಾದಿ ಪಿ.ಪಿ. ರಾಯ್ ಅವರನ್ನು ಒಳಗೊಂಡ ಸಮಿತಿಯು ಈ ಆರೋಪ ಪಟ್ಟಿಯನ್ನು ಮಾರ್ಚ್ 16ರಂದು ನೀಡಿದ್ದು, ಏಪ್ರಿಲ್ 9 ರೊಳಗೆ ಪ್ರತಿಕ್ರಿಯೆ ನೀಡುವಂತೆ ದಿನಕರನ್ ಅವರಿಗೆ ಸೂಚಿಸಿದೆ.
ಆದಾಯ ಮೀರಿದ ಆಸ್ತಿ ಗಳಿಕೆ ಹಾಗೂ ಬೇನಾಮಿ ಹೆಸರಿನಲ್ಲಿ ಸಾರ್ವಜನಿಕರ ಹಾಗೂ ದಲಿತರ ಭೂಮಿ ಕಬಳಿಕೆ. ಇದರೊಂದಿಗೆ ತಮಿಳುನಾಡು ವಸತಿ ಮಂಡಳಿಯಿಂದ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ನಿವೇಶನ ಪಡೆದಿರುವುದು ಸೇರಿದಂತೆ ಹಲವಾರು ಆರೋಪಗಳನ್ನು ಪಿ.ಡಿ. ದಿನಕರನ್ ಅವರ ಮೇಲೆ ಹೊರಿಸಲಾಗಿದೆ.
ಆಗಸ್ಟ್, 2009ರಲ್ಲಿ ಸವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಿಸಲು ಶೀಪಾರಸ್ಸು ಮಾಡಲಾಗಿತ್ತು. ಆದರೆ, ದಿನಾಕರನ್ ಆರೋಪಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನೇಮಕಾತಿಯನ್ನು ತಡೆಯಿಡಿಯಲಾಗಿತ್ತು.