ಜಮ್ಮು/ನವದೆಹಲಿ/ಕೋಲ್ಕೋತ್ತಾ (ಪಿಟಿಐ): ದೆಹಲಿ ಹೈಕೋರ್ಟ್ ಬಾಂಬ್ ಸ್ಫೋಟ ಪ್ರಕರಣದ ಹೊಣೆ ಹೊತ್ತು ಇ-ಮೇಲ್ ಕಳುಹಿಸಿದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರನ್ನು ಹಾಗೂ ಜಾರ್ಖಾಂಡ್ನಲ್ಲಿ ಒಬ್ಬನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕಿಶ್ತವಾರ್ನಲ್ಲಿ ಸ್ಫೋಟದ ಹೊಣೆ ಹೊತ್ತು ಮಾಧ್ಯಮ ಕಚೇರಿಗಳಿಗೆ ಇ-ಮೇಲ್ ಕಳುಹಿಸಿದ ಆರೋಪದ ಮೇಲೆ ಅಬೀದ್ ಮತ್ತು ಶಾರೀಖ್ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ.
ಇವರಿಬ್ಬರಿಗೂ ಯಾವುದೇ ಅಪರಾಧ ಹಾಗೂ ಭಯೋತ್ಪಾದನಾ ಚಟುವಟಿಕೆಯ ಹಿನ್ನಲೆ ಇಲ್ಲ ಎಂಬುದು ಸ್ಪಷ್ಟವಾಗಿದ್ದರೂ ಇವರು ಸ್ಫೋಟ ಸಂಭವಿಸಿದ ಒಂದು ಗಂಟೆಯೊಳಗೆ ಮಾಧ್ಯಮ ಕಚೇರಿಗಳಿಗೆ ಸ್ಫೋಟದ ಹೊಣೆ ಹೊತ್ತು ಇ-ಮೇಲ್ ಕಳುಹಿಸಿದ್ದರು. ಹೀಗಾಗಿ ಇವರನ್ನು ಬಂಧಿಸಿದ್ದು, ಸುಳ್ಳು ಪತ್ತೆಯಂತ್ರದ ಮೂಲಕ ಹಾಗೂ ಮಂಪರು ಪರೀಕ್ಷೆ ಮೂಲಕ ಇವರನ್ನು ಹೆಚ್ಚಿನ ವಿಚಾರಣೆಗೆ ರಾಷ್ಟ್ರೀಯ ಭದ್ರತಾ ಸಂಸ್ಥೆ ಒಳಪಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ನಾಲ್ಕನೇ ಇ-ಮೇಲ್ ಕುರಿತಂತೆ ಜಾರ್ಖಾಂಡ್ನ 14 ವರ್ಷದ ವಿದ್ಯಾರ್ಥಿ ಸನ್ನಿ ಶುಕ್ಲ ಎಂಬಾತನನ್ನು ಬಂಧಿಸಿರುವ ಪೊಲೀಸರು ಈತ ಕುಚೋದ್ಯಕ್ಕಾಗಿ ಮೇಲ್ ಕಳುಹಿಸಿದ್ದು, ಈತನಿಗೂ ಸ್ಫೋಟಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ಈತನ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ.