ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆದಷ್ಟೂ ನಾಡು: ಹಂಪಿ ಟು ಬಸ್ರೂರು

Last Updated 11 ಜೂನ್ 2011, 19:30 IST
ಅಕ್ಷರ ಗಾತ್ರ

ಬಸ್ರೂರು, ಕುಂದಾಪುರ ತಾಲ್ಲೂಕಿನ ಒಂದು ಊರು. ಪ್ರಾಚೀನ ಕರ್ನಾಟಕದ ರೇವು ಪಟ್ಟಣಗಳಲ್ಲಿ ಒಂದು. ಇಲ್ಲಿಗೆ ರೋಮ್, ಚೀನಾ, ಗ್ರೀಸ್, ಯೆಮನ್, ಪೋರ್ಚುಗಲ್, ಇಂಗ್ಲೆಂಡ್, ಡೆನ್ಮಾರ್ಕ್‌ಗಳಿಂದ ಹಡಗುಗಳು ಬಂದು, ತಂಗಿ, ವ್ಯಾಪಾರ ಮಾಡಿಕೊಂಡು ಹೋಗುತ್ತಿದ್ದವು. ಇದರಂತೆಯೇ ಬಿಜಾಪುರ, ಗೇರುಸೊಪ್ಪೆ, ಭಟ್ಕಳ, ಬಾರ್ಕೂರು, ಹೊನ್ನಾವರ, ಐಹೊಳೆ, ಹಂಪಿ ಕೂಡ ಜಾಗತೀಕರಣಗೊಂಡ ವಣಿಕ ಪಟ್ಟಣಗಳಾಗಿದ್ದವು. ವ್ಯಾಪಾರ ಸಂಸ್ಕೃತಿ ಜಗತ್ತಿನ ಪುಟ್ಟ ಊರನ್ನೂ ವಿಶ್ವಾತ್ಮಕಮಾಡಬಲ್ಲದು. ಹೀಗೆ ಜಾಗತೀಕರಣಗೊಂಡಿದ್ದ ಬಸ್ರೂರಿಗೆ ಹೋಗಬೇಕೆಂದು ಬಹು ದಿನಗಳಿಂದ ಹವಣಿಸಿದ್ದೆ. ನಾಥಪಂಥ ಅಧ್ಯಯನ ಮಾಡುತ್ತ ಬಸ್ರೂರಿಗೆ ಹಿಂದೆ ಹೋಗಿ, ಅಲ್ಲಿನ ದೇವೀಗುಡಿಯನ್ನು ನೋಡಿದ್ದುಂಟು. ಆದರೆ ಬಸ್ರೂರಿನ ಹೊಳೆಯನ್ನಾಗಲಿ ರೇವುಪಟ್ಟಣದ ಕುರುಹುಗಳನ್ನು ಆಗಲೀ ನೋಡಲಾಗಿರಲಿಲ್ಲ. ಈಚೆಗೆ ಹೋಗಿಬಂದೆ.

ಬಸ್ರೂರು ಆಕರ್ಷಣೆಗೆ ಎರಡು ಕಾರಣಗಳಿದ್ದವು. ಮೊದಲನೆಯದು, ಕಾರಂತರ `ಮೈಮನಗಳ ಸುಳಿಯಲ್ಲಿ~ ಕಾದಂಬರಿ. ಇದರ ನಾಯಕಿ ಮಂಜುಳೆ, ಕಾರಂತರು ಕಟೆದಿರುವ ಅಪೂರ್ವ ಪಾತ್ರಗಳಲ್ಲಿ ಒಂದು. ಬಸ್ರೂರಿನ ದೇವದಾಸಿಯೂ ಗಣ್ಯವೇಶ್ಯೆಯೂ ಆಗಿದ್ದ ಈಕೆ, ಪ್ರತಿಭಾವಂತ ಗಾಯಕಿ. ಸೂಕ್ಷ್ಮಜ್ಞೆ. ಘನತೆಯ ವ್ಯಕ್ತಿತ್ವದವಳು. ಎರಡನೇ ಕಾರಣ, ನನ್ನ ವಾಸದ ಪರಿಸರದಲ್ಲಿರುವ ಹಂಪಿ (ವಿಜಯನಗರ) ಕೂಡ ವಿದೇಶಿ ವ್ಯಾಪಾರಸ್ಥರು ಬಂದುಹೋಗುತ್ತಿದ್ದ ಅಂತರರಾಷ್ಟ್ರೀಯವಾದ ವ್ಯಾಪಾರಿ ಪಟ್ಟಣವಾಗಿದ್ದು, ಬಸ್ರೂರಿನ ಜತೆ ಆಶ್ಚರ್ಯಕರ ಸಾಮ್ಯವನ್ನು ಹೊಂದಿದ್ದುದು. ಉದಾಹರಣೆಗೆ, ಎರಡೂ ಹೊಳೆಬದಿ ಊರುಗಳು; ಎರಡಕ್ಕೂ ಪೋರ್ಚುಗೀಸ್ ಮತ್ತು ಅರಬ್ ವ್ಯಾಪಾರಿಗಳ ಜತೆ ಸಂಪರ್ಕವಿತ್ತು; ಎರಡೂ ಗುಡಿ, ಬಸದಿ, ಮಸೀದಿಗಳುಳ್ಳ ಬಹುಧರ್ಮೀಯ ತಾಣಗಳು; ಎರಡೂ ಪಟ್ಟಣಗಳ ಪ್ರಧಾನ ದೈವ ಶಿವ; ಎರಡೂ ಕಡೆ ಗಣ್ಯ ವೇಶ್ಯೆಯರ ಸಮುದಾಯವಿತ್ತು; ಎರಡೂ ತಮ್ಮ ತಲೆಯ ಮೇಲೆ ಚರಿತ್ರೆಯ ಭಾರವನ್ನು ಹೊತ್ತು ಬಾಳುತ್ತಿವೆ.

ಹಾಗೆ ಕಂಡರೆ, ಬಸ್ರೂರು ವಿಜಯನಗರ ಆಳಿಕೆಯಲಿದ್ದ ಪಟ್ಟಣವೇ. ಹಂಪಿಯಿಂದ ಬಸ್ರೂರಿಗೆ ನೇರ ವ್ಯಾಪಾರಿಪಥವಿತ್ತು. ಅಲ್ಲಿಂದ ಇಲ್ಲಿಗೆ ಸಂಗೀತಗಾರರು ಬಂದುಹೋಗಿರಬೇಕು. ಯಾಕೆಂದರೆ, ಬಸ್ರೂರಿನ ದೇವದಾಸಿಯರ ಪದಗಳಲ್ಲಿ ತೆಲುಗು ರಚನೆಗಳಿವೆ; ತುಂಗಭದ್ರೆಯ ಪ್ರಸ್ತಾಪವಿದೆ. ಮುಂದೆ ಬ್ರಿಟೀಶರ ಕಾಲದಲ್ಲಿ ಎರಡೂ ಊರುಗಳು ಮದರಾಸು ಪ್ರೆಸಿಡೆನ್ಸಿಯ ಆಳಿಕೆಗೆ ಒಳಪಟ್ಟವು. ಇಲ್ಲಿದ್ದ ಜನಪ್ರಿಯ ಬ್ರಿಟೀಶ್ ಅಧಿಕಾರಿ ಥಾಮಸ್ ಮನ್ರೊ ಬಳ್ಳಾರಿಗೂ ಕಲೆಕ್ಟರನಾಗಿ ಬಂದನು. ಹಂಪಿಗೂ ಬಸ್ರೂರಿಗೂ 400 ಕಿ.ಮೀ ಅಂತರ; ಆದರೆ ಅವನ್ನು ಕಟ್ಟಿರುವ ಚರಿತ್ರೆ ಸಂಸ್ಕೃತಿ ಭಾಷೆ ಆಡಳಿತತೆ ಎಳೆಗಳಲ್ಲಿ ಸಮಾನತೆಯಿದೆ. ಫರಕೆಂದರೆ ಹಂಪಿ, ತನ್ನ ಗತದ ಪಾಳನ್ನು ಬಿಂಬಿಸುತ್ತ ವರ್ತಮಾನದಲ್ಲಿ ವಿದೇಶಿ ಪ್ರವಾಸಿಗರ ನೆಚ್ಚಿನ ತಾಣವಾಗಿ ರೂಪಾಂತರಗೊಂಡರೆ ಬಸ್ರೂರು ವಿಸ್ಮೃತಿಗೆ ಸಂದ ಊರಾಗಿಯೇ ಉಳಿಯಿತು.

ಬಸ್ರೂರನ್ನು ಜಾಗತಿಕ ಖ್ಯಾತಿಯ ರೇವನ್ನಾಗಿಸಿದ `ಕೀರ್ತಿ~ ವಾರಾಹಿಗೆ ಸಲ್ಲಬೇಕೋ ಏನೋ? ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಈ ಹೊಳೆ, ಘಟ್ಟವಿಳಿದು, ದಟ್ಟವಾದ ಕಾಡುಗಳಲ್ಲಿ ಅಲೆದಾಡಿ, ವಿಶಾಲ ಸಮತಟ್ಟು ಪ್ರದೇಶದಲ್ಲಿ ಹರಿಯುತ್ತ, ಅನೇಕ ಕುದುರುಗಳನ್ನು ನಿರ್ಮಿಸಿ, ಬಸ್ರೂರಿನ ಬಡಗು ಮೈಯನ್ನು ಸವರಿಕೊಂಡು, ಗಂಗೊಳ್ಳಿಯ ಬಳಿ ಅರಬ್ಬಿ ಕಡಲು ಸೇರುತ್ತದೆ. ಅದು ಕಡಲನ್ನು ಸೇರುವ ಅಳಿವೆಬಾಗಿಲಿನ ಮೂಲಕ ನಾವೆಗಳು ಒಳಪ್ರವೇಶಿಸಿ ಬಸ್ರೂರಿಗೆ ಬರುತ್ತಿದ್ದವು. ಬಸ್ರೂರಿನಂತೆಯೇ ಹೊಳೆಕಡಲುಗಳ ಈ ಸಂಗಮವಿರುವ ಕಾರಣದಿಂದಲೇ ರೇವುಪಟ್ಟಣವಾದ ಇನ್ನೊಂದು ಊರೆಂದರೆ, ಶರಾವತಿ ದಡದ ಗೇರುಸೊಪ್ಪೆ. ಭಾರತದಲ್ಲಿ ಅತಿಹೆಚ್ಚು ರೇವುಪಟ್ಟಣಗಳನ್ನು ಸೃಷ್ಟಿಸಿದ ಹೊಳೆಯೆಂದರೆ, ಬಂಗಾಳದ ಹೂಗ್ಲಿಯೇ ಇರಬೇಕು. ಸಣ್ಣ ಹಳ್ಳಿಯಾಗಿದ್ದ ಕಾಳಿಘಾಟ್, ಕೊಲ್ಕತ್ತಾ ನಗರವಾಗಿ, ಭಾರತದ ರಾಜಧಾನಿಯಾಗಿ ಬೆಳೆಯಲು ಸಾಧ್ಯವಾಗಿದ್ದು ಈ ಹೂಗ್ಲಿಯ ದೆಸೆಯಿಂದ. ಬಂಗಾಳಕೊಲ್ಲಿಗೆ ಬರುತ್ತಿದ್ದ ಬ್ರಿಟೀಶರ ಡಚ್ಚರ ಪೋರ್ಚುಗೀಸರ ನಾವೆಗಳು, ಹೂಗ್ಲಿಯ ಮೂಲಕ ನುಸುಳಿ, ಪ್ಲಾಸಿ ಮುರ್ಶಿದಾಬಾದ್ ತನಕ ಒಳನಾಡಿನೊಳಗೆ ಹೋಗಿ ವ್ಯಾಪಾರ ನಡೆಸುತ್ತಿದ್ದವು. ಮುಂದೆ ಬ್ರಿಟೀಶ್ ವ್ಯಾಪಾರಿ ಸಂಘವಾದ `ಈಸ್ಟ್ ಇಂಡಿಯಾ ಕಂಪನಿ~, ಪ್ಲಾಸಿ ಕದನದಲ್ಲಿ ಫ್ರೆಂಚರನ್ನು ಸೋಲಿಸಿ ತನ್ನ ಏಕಸ್ವಾಮ್ಯ ಸಾಧಿಸಿದ್ದು, ತನ್ನ ಸರಕುಕೋಠಿಗಳ ರಕ್ಷಣೆಗೆ ಸೈನ್ಯ ಕಟ್ಟಿದ್ದು, ಆ ಸೈನ್ಯದ ಮೂಲಕ ಸ್ಥಳೀಯ ರಾಜರನ್ನು ಸೋಲಿಸುತ್ತಲೊ ಗೆಲ್ಲಿಸುತ್ತಲೊ ಇಡೀ ದೇಶವನ್ನೇ ವಶಪಡಿಸಿಕೊಂಡಿದ್ದು, ಕೊಲ್ಕತ್ತೆಯನ್ನು ರಾಜಧಾನಿ ಮಾಡಿಕೊಂಡು ಶತಮಾನಗಳ ಕಾಲ ಆಳಿದ್ದು- ಎಲ್ಲವೂ ಇತಿಹಾಸ.

ಮುಖ್ಯ ಸಂಗತಿಯೆಂದರೆ, ಬ್ರಿಟೀಶರ ಆಳಿಕೆಯ ಫಲವಾಗಿ ನಮ್ಮ ದೇಶದ ಶಿಕ್ಷಣ, ಭಾಷೆ, ಉದ್ಯಮ, ಸಂಸ್ಕೃತಿ, ಸಾಹಿತ್ಯ, ಧರ್ಮಗಳಲ್ಲಿ ಮತ್ತು ನಮ್ಮ ಆಲೋಚನಾ ಕ್ರಮಗಳಲ್ಲಿ ಸಂಭವಿಸಿದ ಪಲ್ಲಟಗಳು. ಈ ಪಲ್ಲಟಗಳ ಫಲವಾಗಿ `ವಿದೇಶಿತನ~ವು ನಮ್ಮ ಬಾಳಿನ ಒಳಗೆ ಆಳವಾಗಿ ಪ್ರವೇಶಿಸಿ ನಮ್ಮದೇ ಆಗಿ ನೆಲೆಸಿಬಿಟ್ಟಿತು. ಟ್ಯಾಗೋರ್, ವಿವೇಕಾನಂದ, ಮೋಹನರಾಯ್, ಕುವೆಂಪು, ಅಂಬೇಡ್ಕರ್ ಎಲ್ಲರೂ ಈ ಮಹಾಪಲ್ಲಟದ ಫಲಗಳೇ. ಮಂಜುಳೆ ಬಸ್ರೂರಿನಾಕೆ ಇರಬಹುದು. ಅವಳ ಕಥೆಯನ್ನು ಹಿಡಿದಿಟ್ಟಿರುವ ಕಾದಂಬರಿ ಪ್ರಕಾರ ಯೂರೋಪಿನದು. ಇದೇ ಕುಂದಾಪುರ ಸೀಮೆಯ ಕಾರಂತರು ಪಾಶ್ಚಿಮಾತ್ಯ ದೇಶಗಳನ್ನು `ಅಪೂರ್ವ ಪಶ್ಚಿಮ~ ಎಂದು ನಂಬಿದವರು. ಇದೇ ಸೀಮೆಯಿಂದ ಬಂದ ಕವಿಯೂ, ಆಂಗ್ಲ ಪ್ರಾಧ್ಯಾಪಕರೂ ಆಗಿದ್ದ ಗೋಪಾಲಕೃಷ್ಣ ಅಡಿಗರಿಗೆ, ದೇಶೀ ಸತ್ವವನ್ನು ಆರ್ತವಾಗಿ  ಹುಡುಕಲು ಪ್ರೇರಿಸಿದ್ದು ಈ `ಪಡುವಣದ ಗಾಳಿ~ಯೇ. ವಸಾಹತುಶಾಹಿ ಆಳಿಕೆಯ ಪರಿಣಾಮ ನಮ್ಮ ಬಾಳಿನಲ್ಲಿ ನೆಲೆಸಿರುವ ಪರಿಯನ್ನು ಅರಸುತ್ತ ಹೋದರೆ, ಅದರ ಮೂಲವು ಯೂರೋಪಿನ ವಣಿಕ ನಾವೆಗಳನ್ನು ಒಳಬಿಟ್ಟುಕೊಂಡ ಅಳಿವೆಬಾಗಿಲುಗಳಿಗೂ ಹೊಳೆಗಳಿಗೂ ಹೇಗೋ ಬಂದು ನಿಂತುಬಿಡುತ್ತದೆ.

ಗೆಳೆಯರ ಜತೆಗೂಡಿ ಬಸ್ರೂರ ತಿರುಗಾಟ ಆರಂಭಿಸಿದೆ. ಇದಕ್ಕೆ ಬಸ್ರೂರಿನ ಮೇಲೆ ಶಾರದಾ ಕಾಲೇಜಿನವರು ಪ್ರಕಟಿಸಿರುವ ಅಪರೂಪದ ಪುಸ್ತಕವೂ ಅದರಲ್ಲಿರುವ ನಕಾಶೆಯೂ ಚೆನ್ನಾಗಿ ನೆರವಾದವು. ವಿಶೇಷವೆನಿಸಿದ್ದು ಇಲ್ಲಿರುವ ರಾಹುತಕೇರಿ, ಮಂಡಿಕೇರಿ, ವಿಲಾಸಕೇರಿ ಎಂಬ ಹೆಸರಿನ ಬೀದಿಗಳು. ಇವು ಕುದುರೆಸೈನ್ಯ, ಸರಕುಕೋಠಿ ಮತ್ತು ವಿಲಾಸಿನಿಯರಿದ್ದ ತಾಣಗಳು. ಕೊನೆಯ ಎರಡು ಕೇರಿಗಳಂತೂ ಹೊಳೆದಡದಿಂದಲೇ ಆರಂಭವಾಗುತ್ತವೆ. ನಾವೆಗಳು ಸರಕಿಳಿಸುವ ಮಂಡಿಕೇರಿಯ ತುದಿಗೆ ನಿಂತು, ಶತಮಾನಗಳ ಹಿಂದೆ ಹೊಳೆದಡದ ಮೇಲೆ ಜರುಗುತ್ತಿದ್ದ ಚಟುವಟಿಕೆಗಳನ್ನು ಕಲ್ಪಿಸಿಕೊಂಡೆ. ಹಂಪಿಯಲ್ಲಿರುವಾಗಲೂ ಪ್ರವಾಸಿಗರು ಚಿತ್ರಿಸಿರುವ ಗತವೈಭವವನ್ನು ಮನಸ್ಸು ಕಲ್ಪಿಸಿಕೊಳ್ಳುತ್ತದೆ. ನಮ್ಮ ಪಟ್ಟಣಗಳನ್ನು, ರಾಜಾತಿಥ್ಯ ಪಡೆದ ವಿದೇಶಿ ಪ್ರವಾಸಿಗರೂ ಆಸ್ಥಾನ ಕವಿಗಳೂ ಹುಮ್ಮಸ್ಸಿನಲ್ಲಿ ವೈಭವೀಕರಿಸಿ ವರ್ಣನೆ ಮಾಡಿದ್ದಾರೆ. ಆದರೆ ಅಲ್ಲಿನ ಜನಸಾಮಾನ್ಯರ ಪ್ರತಿಕ್ರಿಯೆಯ ರೂಪವಾದ ಸ್ಥಳೀಯ ಜಾನಪದ ಮಾತ್ರ, ಈ ವಿಷಯದಲ್ಲಿ ಕಠೋರ ಮೌನ ತಾಳಿದೆ ಅಥವಾ ಅದು ಬೇರೊಂದೇ ಕಥೆಯನ್ನು ಅರುಹುತ್ತದೆ. ಇದೊಂದು ಮಾರ್ಮಿಕವಾದ ವೈರುಧ್ಯ.

ಬಸ್ರೂರನ್ನು ನಿಜವಾಗಿಯೂ ಜಾಗತಿಕ ವ್ಯಾಪಾರಿ ಪಟ್ಟಣವಾಗಿಸಿದ್ದು ಹೊಳೆ ಕಡಲು ವಣಿಕರು ಹಡಗುಗಳಲ್ಲ; ಸರಕುಗಳು ಮತ್ತು ಅವನ್ನು ಸೃಷ್ಟಿಸುತ್ತಿದ್ದ ಜನರು. ಬಸ್ರೂರಿನಿಂದ ಮರದ ಕೆತ್ತನೆಗಳು, ಪಂಚಲೋಹದ ರಸವನ್ನು ಎರಕಹೊಯ್ದು ಮಾಡಿದ ವಿಗ್ರಹಗಳು, ಬಟ್ಟೆ, ಅಕ್ಕಿ, ಬೆಲ್ಲ, ಮೆಣಸು, ದಾಲ್ಚಿನ್ನಿ ಮುಂತಾದವು ರಫ್ತಾಗುತ್ತಿದ್ದವು. ಇದಕ್ಕೆ ಬೇಕಾಗಿ ಬಸ್ರೂರು ಸೀಮೆಯಲ್ಲಿ ದೊಡ್ಡಸಂಖ್ಯೆಯಲ್ಲಿ ನೇಕಾರರೂ ಗುಡಿಗಾರರೂ ಇದ್ದರು. ಅಕ್ಕಿ ಬೆಳೆಯಲು ಬೇಕಾದ ತಣಿಗೆಯಂತಹ ವಿಶಾಲ ಜಮೀನು ಬಸ್ರೂರು ಸುತ್ತಮುತ್ತ ಈಗಲೂ ಇದೆ. ಇಲ್ಲಿನ ಅಕ್ಕಿ ಮಸ್ಕತ್ತಿಗೆ ಹೋಗುತ್ತಿತ್ತಂತೆ. ತಮ್ಮ ಬಾಲ್ಯದಲ್ಲಿ ಒಳ್ಳೆಯ ಅಕ್ಕಿಯನ್ನು ಮಸ್ಕತಕ್ಕಿ ಎನ್ನಲಾಗುತ್ತಿತ್ತು ಎಂದು ಊರ ಹಿರೀಕರಾದ ಶ್ರೀ ಬಿ.ಕೆ. ಬಳೆಗಾರರು ಹೇಳಿದರು. ಇದಕ್ಕೆ ಪ್ರತಿಯಾಗಿ ಬಸ್ರೂರಿಗೆ ಅರಬಸ್ತಾನದಿಂದ ಸುಗಂಧ ಕುದುರೆ ಖರ್ಜೂರಗಳೂ, ಚೀನಾದಿಂದ ರೇಷ್ಮೆ - ಪಿಂಗಾಣಿ ವಸ್ತುಗಳೂ ಆಮದಾಗುತ್ತಿದ್ದವು. ವಿಜಯನಗರದವರು ತಮಗೆ ಬೇಕಾದ ಅರಬ್ಬಿ ಕುದುರೆಗಳನ್ನು ಭಟ್ಕಳದಂತೆ ಬಸ್ರೂರಲ್ಲೂ ಇಳಿಸಿಕೊಳ್ಳುತ್ತಿದ್ದರು. ಹಂಪಿಯ ಗುಡಿ ಹಾಗೂ ಮಹಾನವಮಿ ದಿಬ್ಬದ ಗೋಡೆಗಳು, ಅರಬ್ ವ್ಯಾಪಾರಿಗಳು ದೊರೆಗೆ ಕುದುರೆಗಳನ್ನು ಪ್ರದರ್ಶಿಸುತ್ತಿರುವ, ನಡುಬಗ್ಗಿಸಿ ವಿವರಣೆ ನೀಡುತ್ತಿರುವ ನೂರಾರು ಶಿಲ್ಪಗಳಿಂದ ತುಂಬಿಹೋಗಿವೆ. 

ವಿಲಾಸಕೇರಿಯ ಹೊಳೆದಡಕ್ಕೆ ಬಂದೆ. ಸಾಮಾನ್ಯವಾಗಿ ವ್ಯಾಪಾರಿ ಕೇಂದ್ರಗಳು ವಿಲಾಸದ ತಾಣಗಳೂ ಆಗುತ್ತವೆ. ವಿಜಯನಗರದ ಸೂಳೆಬಜಾರು ಸಿರಿವಂತ ಗಣಿಕೆಯರ ಜಾಗವಾಗಿತ್ತು. ಉತ್ತರ ಕರ್ನಾಟಕದ ವ್ಯಾಪಾರಿ ಪಟ್ಟಣವಾದ ಲಕ್ಷ್ಮೇಶ್ವರವೂ ಸಾನಿಗಳಿಗೆ ಖ್ಯಾತವಾಗಿತ್ತು. ತಂಬಾಕು ವ್ಯಾಪಾರ ಕೇಂದ್ರವಾದ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯು ವಿಲಾಸಿನಿಯರಿಗೂ, `ತಮಾಶಾ~ ಎಂಬ ಕಲಾಪ್ರಕಾರಕ್ಕೂ ಹೆಸರಾಗಿತ್ತು ಎಂದು ಜಾನಪದ ವಿದ್ವಾಂಸರಾದ ಮುದೇನೂರ ಸಂಗಣ್ಣನವರು ಹೇಳುತ್ತಿದ್ದರು. ಬಸ್ರೂರಿಗೆ ಬಂದಿಳಿಯುತ್ತಿದ್ದ ವಣಿಕರು ಮತ್ತು ನಾವಿಕರು, ಹಡಗು ಸರಕು ತುಂಬಿಕೊಂಡು ಹೊರಡುವ ತನಕ ಈ ಕೇರಿಯಲ್ಲಿ ನಡೆಸುತ್ತಿದ್ದ ವಿಲಾಸದ ಬಗ್ಗೆ ಕಾರಂತರು, ತಮ್ಮ ಕಾದಂಬರಿಯ ಮೊದಲ ಭಾಗದಲ್ಲಿ ಚಾರಿತ್ರಿಕ ವಿಶ್ಲೇಷಣೆ ಮಾಡುತ್ತಾರೆ. ವಿಶೇಷವೆಂದರೆ, ಈ ವಿಲಾಸವು ಗಣ್ಯರಿಗೆ ಮಾತ್ರ ಮೀಸಲಾಗಿತ್ತು. ಪ್ರಾಚೀನ ಕಾವ್ಯಗಳ ಅಷ್ಟಾದಶ ವರ್ಣನೆಗಳಲ್ಲಿ ಬರುವ ವೇಶ್ಯಾವಾಟಿಕೆಯ ವರ್ಣನೆಯಲ್ಲಿ, ರಾಜಕುಮಾರರು ಇಂತಹ ಕೇರಿಗಳಲ್ಲಿ ವಿಹರಿಸುವ ಚಿತ್ರಗಳಿವೆಯಷ್ಟೆ. ಮಂಜುಳೆಯ ಮನೆಗೆ ಬರುವವರು ಕೂಡ ಸಾಮಾನ್ಯರಲ್ಲ. ಸಿರಿವಂತರು. ಆದರೆ ಇಲ್ಲಿನ ವಿಲಾಸದಲ್ಲಿ ಕೇವಲ ಮೈಸುಖ ಮಾತ್ರ ಇರಲಿಲ್ಲ; ಮನಸ್ಸನ್ನು ಅರಳಿಸುವ ಶ್ರೇಷ್ಠವಾದ ಸಂಗೀತ ನೃತ್ಯವೂ ಕೂಡ ಇರುತ್ತಿತ್ತು. ಮಂಜುಳೆ ಕೇವಲ ಗಣಿಕೆಯಲ್ಲ. ಅವಳಿಗೆ ಕಲೆಯ ಲೋಕವೂ ಇದೆ. ಇದೇ ಗಣಿಕೆಯರ ಲೋಕದಿಂದ- ಲಖನೌದ ಉಮ್ರೋವ್‌ಜಾನಳಿಂದ ಹಿಡಿದು ಬೆಂಗಳೂರು ನಾಗರತ್ಮಮ್ಮನವರ ತನಕ- ಭಾರತದ ದೊಡ್ಡದೊಡ್ಡ ಗಾಯಕರು ನರ್ತಕರು ಮೂಡಿಬಂದರು. ಆದರೆ ವ್ಯಾಪಾರ ಮತ್ತು ವಿಲಾಸದ ಊರುಗಳು, ಸರಕುಗಳ ಜತೆ ಅನೇಕ ರೋಗಗಳನ್ನೂ ಆಮದು ಮಾಡಿಕೊಳ್ಳಬೇಕಾಗುತ್ತವೆ ಎಂಬ ಕಹಿಸತ್ಯವನ್ನು ಹೇಳಲು ಕಾರಂತರು ಮರೆಯುವುದಿಲ್ಲ.
ವಿಲಾಸಕೇರಿಯ ಬಂದರುಗಟ್ಟೆ ದಡಕುಸಿಯದೆ ಗಟ್ಟಿಮುಟ್ಟಾಗಿದೆ. ಪಾವಟಿಗೆಯ ಕಲ್ಲಚಪ್ಪಡಿಗಳು ಮಾತ್ರ ಜರುಗಿ ಹೋಗಿವೆ. ಹಿಂದೆ ಹೊಳೆ ಆಳವಾಗಿ ಹರಿಯುತ್ತಿರಬೇಕು. ಈಗ ಅದರ ತಲೆಯ ಮೇಲೆ ಅಣೆ ಕಟ್ಟಲಾಗಿದೆ; ದಡದ ಆಸುಪಾಸಿನ ಕಾಡನ್ನು ಕಡಿತಲೆ ಮಾಡಿ ಸಾಗುವಳಿ ಮಾಡಲಾಗಿದೆ. ಹೀಗಾಗಿ ಮಣ್ಣು ಜರಿದು, ಹೊಳೆ ಹೂಳುತುಂಬಿ ದಿಕ್ಕೆಟ್ಟು ಹರಿಯುತ್ತ, ನಡುವೆ ಹೊಸ ಕುದುರುಗಳನ್ನು ನಿರ್ಮಿಸಿದೆ. ಕೆಲವು ಕುದುರುಗಳಲ್ಲಿ ರೆಸಾರ್ಟುಗಳು ಆರಂಭವಾಗಿವೆ. ಹೊಳೆಯಲ್ಲಿ ಮೀನುಗಾರಿಕೆಗೆ ಬದಲು, ತಳದಲ್ಲಿರುವ ಹೊಯಿಗೆಯನ್ನು ಎತ್ತಿ ದೂರದ ನಗರಗಳಿಗೆ ಕಳಿಸುವ ಹೊಸ ದಂಧೆ ಶುರುವಾಗಿದೆ. ಕಾಲ ಬದಲಾದಂತೆ, ಬಸ್ರೂರಿನ ವಿಲಾಸ ಮತ್ತು ವ್ಯಾಪಾರದ ಪರಿಯೂ ಬದಲಾಗಿದೆ.

ವ್ಯಾಪಾರಿ ಚಟುವಟಿಕೆಗಳಿಂದ ಶೇಖರವಾಗುವ ಸಂಪತ್ತು ಕಲಾಕಾರರಿಗೆ ಆಶ್ರಯ ಕಲ್ಪಿಸುವಂತೆ, ಧಾರ್ಮಿಕ ಚಟುವಟಿಕೆಗಳಿಗೂ ಪ್ರೇರಣೆ ಒದಗಿಸುತ್ತದೆ. ಬಸ್ರೂರಿನ ಜತೆ ವ್ಯಾಪಾರ ಸಂಬಂಧವಿದ್ದ ಹಂಪಿ, ಲಕ್ಷ್ಮೇಶ್ವರ, ಐಹೊಳೆಗಳು ಗುಡಿಗಳು ತುಂಬಿದ ಊರುಗಳೂ ಆಗಿವೆ; ಹಂಪಿಯ ಪ್ರಮುಖ ಗುಡಿಗಳ ಮುಂದೆ ಕಡ್ಡಾಯವಾಗಿ `ಬಜಾರು~ಗಳಿರುವುದು ಗಮನಾರ್ಹ. ಬಸ್ರೂರಿನ ಪ್ರಸಿದ್ಧ ನಖರೇಶ್ವರ ಗುಡಿಯನ್ನು (ನಖರ=ವ್ಯಾಪಾರಿ ಸಂಘ) ಇಲ್ಲಿದ್ದ ಶೈವ ವ್ಯಾಪಾರಿಗಳು ಕಟ್ಟಿಸಿದರು. ಇಲ್ಲಿದ್ದ ಪ್ರಾಚೀನ ಮಸೀದಿಯನ್ನು `ಹಂಜಮಾನ~ (ಅರಬ್ ವ್ಯಾಪಾರಿಗಳ ಸಂಘ) ನಿರ್ಮಿಸಿದ್ದು. ಇಲ್ಲಿನ ಪ್ರಾಚೀನ ಚರ್ಚು ಕೂಡ ಯೂರೋಪಿನ ನಾವಿಕರು ಹಾಗೂ ವ್ಯಾಪಾರಿಗಳಿಗಾಗಿ ಕಟ್ಟಿದ್ದೆಂದು ತೋರುತ್ತದೆ.

ಎಲ್ಲ ವ್ಯಾಪಾರ ವಹಿವಾಟು ನಿರ್ವಹಿಸುವುದಕ್ಕೆ ರಾಜಕೀಯ ಅಧಿಕಾರ ಹುಟ್ಟಿಕೊಳ್ಳುತ್ತದೆ. ಈ ವ್ಯಾಪಾರ ಮತ್ತು ಅಧಿಕಾರಗಳಲ್ಲಿ ಸದಾ ಇರುವ ಅನಿಶ್ಚಿತತೆ ಮತ್ತು ಅಭದ್ರತೆಯಿಂದ ಪಾರಾಗಲು ವರ್ತಕರಿಗೂ ಅಧಿಕಾರಸ್ಥರಿಗೂ ಅದೃಶ್ಯ ಶಕ್ತಿಯೊಂದರ ನಂಬಿಕೆಯ ಆಸರೆ ಬೇಕಾಗುತ್ತಿರಬೇಕು. ಇದನ್ನು ವರ್ತಮಾನ ಕರ್ನಾಟಕದಲ್ಲಿ ಅಧಿಕಾರಸ್ಥರು ಮಾಡುತ್ತಿರುವ `ಧಾರ್ಮಿಕ~ ಚಟುವಟಿಕೆಗಳಲ್ಲೂ ೀಡಬಹುದು. ಬಳ್ಳಾರಿ ಸೀಮೆಯಲ್ಲಿ ಗಣಿದಂಧೆಯ ಜತೆಯಲ್ಲೇ ಧಾರ್ಮಿಕ ಕಾರ್ಯಕ್ರಮಗಳಲ್ಲೂ ವಿಚಿತ್ರ ಹೆಚ್ಚಳವಾಯಿತು; ಕರಾವಳಿಯಲ್ಲಿ ವ್ಯಾಪಾರಿ ಚಟುವಟಿಕೆ ಹಾಗೂ ಸಂಪತ್ತಿನ ಆಗಮನದ ಜತೆಜತೆಗೇ ಎಲ್ಲ ಸಮುದಾಯಗಳಲ್ಲಿ `ಧಾರ್ಮಿಕ~ ಚಟುವಟಿಕೆಗಳು ಸಹ ಹೆಚ್ಚಳಗೊಂಡಿವೆ.   

ವ್ಯಾಪಾರ, ಸಂಪತ್ತು, ವಿಲಾಸ, ಅಧಿಕಾರ, `ಧಾರ್ಮಿಕ~ ಚಟುವಟಿಕೆ- ಇದೊಂದು ವರ್ತುಲ. ಈ ವರ್ತುಲದಲ್ಲಿ ಪೈಪೋಟಿ ಇರುವುದರಿಂದ ಯುದ್ಧಗಳೂ ಸೇರುತ್ತವೆ. ಹೂಗ್ಲಿದಡದಲ್ಲಿ ಬ್ರಿಟೀಶರಿಗೂ ಫ್ರೆಂಚರಿಗೂ ಕದನವಾಗಿದ್ದು ವ್ಯಾಪಾರಿ ಹಿತಾಸಕ್ತಿಯಿಂದಲೇ. ವ್ಯಾಪಾರಿ ಊರುಗಳು ಸಂಪತ್ತಿನ ತಾಣವಾಗುತ್ತಿದ್ದ ಹಾಗೆ, ಅವುಗಳ ಮೇಲೆ ಕಬಜಾ ಸಾಧಿಸಲು ಆಕ್ರಮಣಕಾರರೂ ಹುಟ್ಟುತ್ತಾರೆ. ಬಸ್ರೂರನ್ನು ವಶಪಡಿಸಿಕೊಂಡು, ಇಲ್ಲಿನ ವಾಣಿಜ್ಯ ವಹಿವಾಟಿನ ಮೇಲೆ ಹಿಡಿತ ಸಾಧಿಸಲು, ಪೋರ್ಚುಗೀಸರು, ಬ್ರಿಟೀಶರು, ವಿಜಯನಗರದವರು, ಕೆಳದಿಯವರು, ಶಿವಾಜಿ ಮತ್ತು ಹೈದರಾಲಿ ಮುರಿದುಕೊಂಡುಬಿದ್ದರು. ಇವರಲ್ಲಿ ಬಸ್ರೂರಿನ ಪಾಲಿಗೆ ಯಾರು ದೇಶಿಗರು, ಯಾರು ವಿದೇಶಿಗರು?  

ಜಾಗತಿಕ ವ್ಯಾಪಾರವು ಕದನ ಕ್ರೌರ್ಯ ನಾಶಗಳನ್ನು ಸೃಷ್ಟಿಸುತ್ತವೆ ನಿಜ. ಆದರೆ ಅದು ಜನಾಂಗ, ಧರ್ಮ, ಭಾಷೆ ಮತ್ತು ಸಂಸ್ಕೃತಿಗಳನ್ನು ಕೂಡಿಸಿ ಕುದಿಸುವ ಕೆಲಸವನ್ನೂ ಮಾಡುತ್ತದೆ. ಭಾರತದ ವಾಣಿಜ್ಯ ರಾಜಧಾನಿ ಮುಂಬಯಿ ಇದಕ್ಕೊಂದು ಸಾಕ್ಷಿ. ಬಿಜಾಪುರ ದೆಹಲಿಗಳಲ್ಲಿ ಪರ್ಶಿಯದ, ಹಂಪಿಯಲ್ಲಿ ಪೋರ್ಚುಗೀಸ್ ಮತ್ತು ಅರಬಸ್ಥಾನದ, ಕೊಲ್ಕತ್ತೆ ಮುಂಬಯಿಗಳಲ್ಲಿ ಯೂರೋಪಿನ ಕುರುಹುಗಳು ಎಷ್ಟೊಂದಿವೆ! ಬಸ್ರೂರಿನ ದೇವಿ ಗುಡಿಯಲ್ಲಿರುವ ಹುಲಿಯ ಪ್ರತಿಮೆ ತೋರಿಸುತ್ತ ಬಿ.ಕೆ.ಬಳೆಗಾರರು, `ಇದು ಚೀನಾದಿಂದ ಬಂದಿರಬಹುದು~ ಎಂದರು; ಇಲ್ಲಿನ ವೆಂಕಟರಮಣ ಗುಡಿಯ ಅರ್ಚಕರ ಮನೆಯ ಮೇಲಿರುವ ಪೋರ್ಚುಗೀಸ್ ಚಿಹ್ನೆಯನ್ನು ಇತಿಹಾಸಕಾರರು ಹಿಂದೆಯೇ ಗುರುತಿಸಿದ್ದಾರೆ. ವಿಜಯನಗರದ ಮಹಾನವಮಿ ದಿಬ್ಬದ ಮೇಲೆ ಅರಬ್ಬರು ಕುದುರೆ ವ್ಯಾಪಾರ ಮಾಡುತ್ತಿರುವ ಶಿಲ್ಪಗಳು ಮಾತ್ರವಲ್ಲ, ಅವರು ದಫ್ ವಾದ್ಯ ನುಡಿಸುತ್ತ ನರ್ತಿಸುತ್ತಿರುವ, ಒಂಟೆಗಳು ಖರ್ಜೂರದ ಮರವೂ ಇರುವ ಶಿಲ್ಪವೂ ಇವೆ.

ಬಸ್ರೂರು- ಗುಡಿ ಚರ್ಚು ಮಸಜೀದು ಬಸದಿಯೇ ಮೊದಲಾಗಿ ವಿವಿಧ ಧರ್ಮದ ಕುರುಹುಗಳನ್ನು, ಕಲೆಯ ಪಳೆಯುಳಿಕೆ, ಪಾಳುಬಿದ್ದ ಕೆರೆ, ಇಲ್ಲವಾಗಿರುವ ಕೋಟೆಗಳನ್ನು, ಮೈತುಂಬ ತಳೆದು ಬದುಕುತ್ತಿದೆ. ಅದಕ್ಕೀಗ ಗತವೈಭವದ ಸಂಭ್ರಮವೂ ಇಲ್ಲ; ಪತನದ ನೋವೂ ಇಲ್ಲ. ಹಂಪಿಯಂತೆ ಅದು ಚರಿತ್ರೆಯ ಸ್ಮೃತಿಗಳ ಭಾರವನ್ನು ಹೊತ್ತುಕೊಂಡು ಬದುಕುತ್ತಿಲ್ಲ; ಹೊಸ ಅನುಭವಗಳಲ್ಲಿ ಹೊಸ ಮೈಪಡೆಯುತ್ತ ಬದುಕುತ್ತಿದೆ. ಇದನ್ನೆಲ್ಲ ಸಾಕ್ಷೀರೂಪದಲ್ಲಿ ನೋಡುತ್ತ ಹೊಳೆ ಮೌನವಾಗಿ ಹರಿಯುತ್ತಿದೆ.

ತಿರುಗಾಟದ ಕೊನೆಗೆ ಹೊಳೆ ಹಾದು ಎದುರು ಕಾಣುವ ಕುದುರಿಗೆ ಹೋಗಬೇಕೆನಿಸಿತು. ಮಂಡಿಬಾಗಿಲ ಬಳಿ ಬಂದರೆ ದಾಟಿಸಲು ದೋಣಿ ಸಜ್ಜಾಗಿಟ್ಟುಕೊಂಡು, ಒಬ್ಬ ಮಹಿಳೆ ನಿಂತಿದ್ದರು. ಆಕೆಯ ಹೆಸರು ವೆಂಕಮ್ಮ ಖಾರ್ವಿ. ಕೊಂಕಣಿ ಬೆಸ್ತರಾಕೆ. ವಯಸ್ಸಾದರೂ ತನ್ನ ಕಾಯಕ ಬಿಟ್ಟಿಲ್ಲ. ಮೊಗದಲ್ಲಿ ತಾಯ್ತನ ತುಂಬಿದ ಆಕೆಗೆ ಬಸ್ರೂರಿನ ಇತಿಹಾಸದ ಯಾವ ಸ್ಮೃತಿಯ ಗರಜೂ ಇರಲಿಲ್ಲ. ಆದರೆ ಹೊಯಿಗೆ ತೆಗೆಯುವುದರಿಂದ ಮೀನುಗಾರಿಕೆಗೆ ಕಷ್ಟವಾಗುತ್ತಿದೆಯೆಂದೂ, ದಡಗಳು ಕುಸಿದು ಹೊಳೆ ಊರೊಳಗೆ ನುಗ್ಗಬಹುದು ಎಂದೂ ಆತಂಕ ವ್ಯಕ್ತಮಾಡಿದರು. ದುಡಿವ ಜನ ಹರಿವ ಹೊಳೆಯಂತೆ. ಚರಿತ್ರೆಯ ಭಾರವನ್ನು ಹೊತ್ತು ಬಾಳುವುದಿಲ್ಲ. ವರ್ತಮಾನದ ತಲ್ಲಣಗಳೇ ಅವರಿಗೆ ಹಾಸಿ ಹೊದೆಯುವಷ್ಟು. ಬಸ್ರೂರಿನ ಗತ ಚರಿತ್ರೆಗೆ ಮರುಳಾಗಿ ಬಂದ ನನ್ನ ವ್ಯಸನವನ್ನು ವೆಂಕಮ್ಮನ ವರ್ತಮಾನದ ತಳಮಳವು ಅಣಕಿಸಿದಂತಾಯಿತು.

(ಬಸ್ರೂರು ತಿರುಗಾಟದಲ್ಲಿ ಜತೆಗೆ ಬಂದ ಜಯಪ್ರಕಾಶ ಶೆಟ್ಟಿ, ದಿನೇಶ ಹೆಗ್ಡೆ ಅವರಿಗೂ, ಚರ್ಚೆ ಮಾಡಿದ ಕನರಾಡಿ ವಾದಿರಾಜ ಭಟ್ಟ, ಬಿ.ಕೆ.ಬಳಿಗಾರ ಅವರಿಗೂ ಕೃತಜ್ಞತೆಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT