ಕೃಷ್ಣರಾಜಪುರ: ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವ ಚಟುವಟಿಕೆಗಳಲ್ಲಿ ಕಲೆ ಕೂಡ ಒಂದು ಎಂದು ಬಿಬಿಎಂಪಿ ಸದಸ್ಯ ಎನ್.ವೀರಣ್ಣ ಹೇಳಿದರು.
ಪುಷ್ಪಾಂಜಲಿ ನಾಟ್ಯಕಲಾ ಅಕಾಡೆಮಿಯು ಬಸವನಪುರದ ಸಿಲಿಕಾನ್ ಸಿಟಿ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೊರ ದೇಶಗಳಲ್ಲಿ ಕಲಾ ಪ್ರದರ್ಶನ ನೀಡುವ ಅವಕಾಶ ದೊರೆಯುವ ಈ ಭಾಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವುದಾಗಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಸಂಗಮೇಶ ಬಾಡವಾಡಿಗಿ, ಪರಿಷತ್ ವತಿಯಿಂದ ನಡೆಯುವ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುವುದಾಗಿ ಭರವಸೆ ನೀಡಿದರು.
ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಚಂದ್ರಶೇಖರ್, ನಾಟ್ಯ ಕಲಾ ಅಕಾಡೆಮಿಗೆ ಕಾಲೇಜಿನಿಂದ ಎಲ್ಲ ರೀತಿಯ ನೆರವು ಒದಗಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಮುಂದೆ ಬರಬೇಕು ಎಂದರು.
ಗೌರವ ಅಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ವಿದ್ವಾನ್ ಕೆ.ಎಂ. ರಮೇಶ್, ಉಪಾಧ್ಯಕ್ಷ ಕೆ.ರಮೇಶ್, ಶಿಕ್ಷಕ ನಟರಾಜ್ ಉಪಸ್ಥಿತರಿದ್ದರು. ಅಧ್ಯಕ್ಷ ಚಂದ್ರಶೇಖರ್ರೆಡ್ಡಿ ಸ್ವಾಗತಿಸಿದರು.
ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೆರೆದವರಿಗೆ ಮುದ ನೀಡುವಲ್ಲಿ ಯಶಸ್ವಿಯಾಯಿತು.