ಬೆಂಗಳೂರು: ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಉಪ ನಾಯಕನ ಆಯ್ಕೆ ಬಗ್ಗೆ ಮಂಗಳವಾರ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಜೆಡಿಎಸ್ ಶಾಸಕರ ಸಭೆ ಮಂಗಳವಾರ ನಡೆಯಲಿದ್ದು, ಒಮ್ಮತ ಮೂಡಿದರೆ ಆ ದಿನವೇ ಆಯ್ಕೆ ಮಾಡಲಾಗುವುದು ಎಂದು ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಶಾಸಕರಾದ ಮಧು ಬಂಗಾರಪ್ಪ, ವೈ.ಎಸ್.ವಿ. ದತ್ತ, ಮಲ್ಲಿಕಾರ್ಜುನ ಖೂಬಾ, ಜಮೀರ್ ಅಹ್ಮದ್, ಎಚ್.ಎಸ್. ಶಿವಶಂಕರ್, ಸಾ.ರಾ. ಮಹೇಶ್ ಹೆಸರು ಗಳು ಮುಖ್ಯ ಸಚೇತಕರ ಸ್ಥಾನಕ್ಕೆ ಕೇಳಿ ಬರುತ್ತಿವೆ.
ಮಧು ಬಂಗಾರಪ್ಪ ಆಯ್ಕೆ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಮೂಲಗಳು ತಿಳಿಸಿವೆ.
ವಿರೋಧ ಪಕ್ಷದ ಮುಖ್ಯಸಚೇತಕರಿಗೆ ಸಚಿವರ ಸ್ಥಾನಮಾನ ಇರುವುದರಿಂದ ಸಹಜವಾಗಿಯೇ ಪೈಪೋಟಿ ಜೋರಾಗಿದೆ. ಇದರಿಂದಾಗಿಯೇ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ. ಮುಖ್ಯಸಚೇತಕ ಹಾಗೂ ಉಪ ನಾಯಕನ ಆಯ್ಕೆ ಕೂಡಲೇ ನಡೆಯಬೇಕು, ಮತ್ತಷ್ಟು ವಿಳಂಬಬೇಡ ಎಂಬ ಇಂಗಿತವನ್ನು ಕುಮಾರ ಸ್ವಾಮಿ ಆಪ್ತ ಶಾಸಕರ ಬಳಿ ವ್ಯಕ್ತಪಡಿಸಿದ್ದಾರೆ.
ಎಚ್.ಕೆ. ಕುಮಾರಸ್ವಾಮಿ ಅಥವಾ ಅಲ್ಪಸಂಖ್ಯಾತ ಸಮುದಾಯದ ಶಾಸಕರೊಬ್ಬರು ಉಪ ನಾಯಕರಾಗ ಬಹುದು ಎಂದು ಗೊತ್ತಾಗಿದೆ.