ಯಳಂದೂರು: `ಕನ್ನಡ ನಾಡು, ಭಾಷೆ, ಸಂಸ್ಕೃತಿಗೆ ನೆರೆಯ ಪ್ರವೇಶಗಳಿಂದ ಕುತ್ತು ಬಂದಿದೆ. ಈಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ' ಎಂದು ಕರ್ನಾಟಕ ಕಾವಲು ಪಡೆಯ ಜಿಲ್ಲಾಧ್ಯಕ್ಷ ಪರಶಿವಮೂರ್ತಿ ಸಲಹೆ ನೀಡಿದರು.
ಪಟ್ಟಣದಲ್ಲಿ ಭಾನುವಾರ ಕರ್ನಾಟಕ ಕಾವಲು ಪಡೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಡಿನ ಸಂಸ್ಕೃತಿ ರಕ್ಷಣೆಗೆ ರಾಜ್ಯದ ಮಹಾನ್ ನಾಯಕರು ತಮ್ಮ ಸರ್ವಸ್ವ ಧಾರೆ ಎರೆದಿದ್ದಾರೆ. ಆದರೆ, ಈಚಿನ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಗಳ ಅನುಕರಣೆ ಹಾಗೂ ಅನ್ಯಭಾಷಿಕರ ಹಾವಳಿಯಿಂದ ನಾಡು- ನುಡಿಗೆ ಧಕ್ಕೆಯಾಗುತ್ತಿದೆ. ಈ ದಿಸೆಯಲ್ಲಿ ಕನ್ನಡಪರ ಸಂಘಟನೆಗಳು ಎಚ್ಚೆತ್ತುಕೊಳ್ಳಬೇಕು ಎಂದರು.
ನಾಡಿನ ರಕ್ಷಣೆಗೆ ಕರ್ನಾಟಕ ಕಾವಲು ಪಡೆಯ ರಚನೆಯಾಗಿದೆ. ನಾಡಿನಾದ್ಯಂತ ಕನ್ನಡಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ. ಇಲ್ಲಿನ ಘಟಕವೂ ನಿಸ್ಪಕ್ಷಪಾತವಾಗಿ, ಭ್ರಷ್ಟಾಚಾರ ಮುಕ್ತ ರಾಜ್ಯ ನಿರ್ಮಾಣಕ್ಕೆ ದುಡಿಯಬೇಕು ಎಂದು ಸಲಹೆ ನೀಡಿದರು.
ಜಯರಾಜು, ರಂಗಸ್ವಾಮಿ, ಜಾನ್, ಶ್ರೀಕಂಠ, ರಾಕಿ, ಕಂದಹಳ್ಳಿ ಸಿದ್ದರಾಜು, ಸತೀಶ್, ಮಹೇಶ್ ಇತರರು ಇದ್ದರು.
ಪದಾಧಿಕಾರಿಗಳು: ಸುರೇಶ್ಕುಮಾರ್ (ಅಧ್ಯಕ್ಷ),ಬಸವರಾಜು (ಉಪಾಧ್ಯಕ್ಷ), ಕಿರಣ್ಕುಮಾರ್ (ಜಿಲ್ಲಾ ಘಟಕದ ಕಾರ್ಯದರ್ಶಿ).