ಗಣಪತಿ ಸಚ್ಚಿದಾನಂದ ಆಶ್ರಮ: ಶನಿವಾರ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಂದ ಧ್ಯಾನ ಮತ್ತು ಆರೋಗ್ಯಕ್ಕಾಗಿ ‘ನಾದ ತತ್ವ ರಾಗ ಸಾಗರ’ ಸಂಗೀತ. ಪಕ್ಕವಾದ್ಯದಲ್ಲಿ: ಡಾ. ಎಲ್. ಸುಬ್ರಹ್ಮಣ್ಯಂ (ಪಿಟೀಲು),ಕಾರೈಕುಡಿ ಮಣಿ (ಮೃದಂಗ), ವಿ. ಸುರೇಶ್ (ಘಟ), ಬಾಲಸಾಯಿ (ಕೊಳಲು) ಮತ್ತು ಸೆಲೆಸ್ಟಿಯಲ್ ಮೆಸೇಜ್ ಸಂಗೀತ ತಂಡ.
ಸಂಗೀತವೆಂದರೆ ತಾಳ ಮತ್ತು ಸ್ವರದಿಂದ ಹುಟ್ಟುವ ಕಂಪನ. ಸಂಗೀತ ಧ್ವನಿಯಿಂದ ಹುಟ್ಟಿರಲಿ ಅಥವಾ ವಾದ್ಯಗಳಿಂದ ಹೊಮ್ಮಲಿ ಅದರಲ್ಲಿ ತಾಳ ಮತ್ತು ಸ್ವರ ಇದ್ದೇ ಇರುತ್ತದೆ. ಮೀನು ನೀರಿನಲ್ಲಿ ವಾಸಿಸುವಂತೆ ನಾವು ವಿವಿಧ ಕಂಪನಗಳ ಜಗತ್ತಿನಲ್ಲಿ ವಾಸಿಸುತ್ತೇವೆ. ಆತ್ಮ ಭಾವನೆಗಳ ಕಂಪನ ಹೀರಿಕೊಳ್ಳುವುದು, ಮನಸ್ಸು ವಿಚಾರಗಳ ಕಂಪನ ಹೀರಿಕೊಳ್ಳುವುದು, ಕಿವಿ ಶಬ್ದದ ಕಂಪನ ಹೀರಿಕೊಳ್ಳುವುದು ನಮ್ಮ ಅರಿವಿಗೆ ಬರುವುದಿಲ್ಲ. ನಮ್ಮ ಮೂಡ್ಗಳು, ಆಸಕ್ತಿಗಳು ಎಲ್ಲವೂ ಕಂಪನವನ್ನು ಅವಲಂಬಿಸಿರುತ್ತವೆ. ಹಾಗೆಯೇ ನಮ್ಮ ನಾಡಿಮಿಡಿತ, ಹೃದಯ ಬಡಿತ, ರಕ್ತ ಪರಿಚಲನೆ, ಯೋಚನಾ ಲಹರಿ ಎಲ್ಲವೂ ತಾಳ ಮತ್ತು ಸ್ವರವನ್ನು ಅವಲಂಬಿಸಿರುತ್ತದೆ.ದೇಹದ ಅಂಗಾಂಗಳ, ವಿವಿಧ ವ್ಯವಸ್ಥೆಗಳ ತಾಳ ತಪ್ಪಿದಾಗ ರೋಗ ಕಾಣಿಸಿಕೊಳ್ಳುತ್ತದೆ ಎನ್ನುವುದು ಸ್ವಾಮೀಜಿ ಅವರ ವ್ಯಾಖ್ಯಾನ.
ಸಂಗೀತವೇ ತಮ್ಮ ಭಾಷೆ, ಸಂಗೀತವೇ ಅಭಿವ್ಯಕ್ತಿ ಮತ್ತು ಸಂಗೀತವೇ ತಮ್ಮ ಧರ್ಮ ಎಂದು ಹೇಳಿಕೊಳ್ಳುವ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಧ್ಯಾನ ಮತ್ತು ಸಂಗೀತದ ರಾಗಗಳ ಮೂಲಕ ದೈಹಿಕ, ಮಾನಸಿಕ ರೋಗಗಳನ್ನು ಗುಣಪಡಿಸಲು ಸಾಧ್ಯ ಎಂದು ಹೇಳುತ್ತಾರೆ. ಇಂಗ್ಲಿಷ್ ಹಾಗೂ ಹಲವು ಭಾರತೀಯ ಭಾಷೆಗಳಲ್ಲಿ ಭಕ್ತಿಗೀತೆ ಬರೆದಿರುವ ಸ್ವಾಮೀಜಿ, ಹಲವು ವಾದ್ಯಗಳಲ್ಲೂ ಪರಿಣತಿ ಸಾಧಿಸಿದ್ದಾರೆ. ತಮ್ಮ ಅದ್ಭುತ ಧ್ವನಿಯಿಂದ ಸಂಗೀತ ಕಚೇರಿಗಳಲ್ಲಿ ಪ್ರೇಕ್ಷಕರಿಗೆ ಅವಿಸ್ಮರಣೀಯ ಅನುಭವ ನೀಡುತ್ತಾರೆ.
ಸ್ಥಳ: ಗಾಯತ್ರಿ ವಿಹಾರ, ಅರಮನೆ ಮೈದಾನ (ಮೇಕ್ರಿ ವೃತ್ತ). ಸಂಜೆ 6.30. ಪ್ರವೇಶ ಉಚಿತ.