ಮದ್ದೂರು: ತಾಲ್ಲೂಕಿನ ಉಪ್ಪಿನಕೆರೆ ವ್ಯಾಪ್ತಿಯ ಕಡೇ ಭಾಗದ ನಾಲೆಗಳಿಗೆ ನೀರು ಹರಿಸದ ಕ್ರಮ ಖಂಡಿಸಿ ವಿವಿಧ ಗ್ರಾಮಗಳ ರೈತರು ಗುರುವಾರ ಇಲ್ಲಿನ ಕಾವೇರಿ ನೀರಾವರಿ ನಿಗಮ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಉಪ್ಪಿನಕೆರೆ, ಬೋರಾಪುರ, ಹುಲಿಗೆರೆಪುರ, ನಗರಕೆರೆ, ಗೊರವನಹಳ್ಳಿ, ಚನ್ನಸಂದ್ರ, ಮಾಲಗಾರನಹಳ್ಳಿ, ಅಜ್ಜಹಳ್ಳಿ, ಉಪ್ಪಾರದೊಡ್ಡಿ, ಸೋಂಪುರ ಗ್ರಾಮಗಳಿಂದ ದ್ವಿಚಕ್ರವಾಹನಗಳ ಮೂಲಕ ಕಚೇರಿಗೆ ಆಗಮಿಸಿದ ರೈತರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.
ಕಚೇರಿಯೊಳಗಿದ್ದ ಸಿಬ್ಬಂದಿಯನ್ನು ಈಚೆಗೆ ಕಳುಹಿಸಿ ಬೀಗ ಜಡಿದ ರೈತರು ಒಂದು ಗಂಟೆಗೂ ಹೆಚ್ಚು ಕಾಲ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.
ಮುಖಂಡ ರಾಮಲಿಂಗಯ್ಯ ಮಾತನಾಡಿ, ಕೆಆರ್ಎಸ್ ಜಲಾಶಯದಲ್ಲಿ ಸಾಕಷ್ಟು ನೀರಿದೆ. ಸಮರ್ಪಕ ಪ್ರಮಾಣದಲ್ಲಿ ನೀರು ಹರಿಸದ ಕಾರಣ ನಮ್ಮ ಉಪ್ಪಿನಕೆರೆ ಭಾಗಕ್ಕೆ ನೀರು ತಲುಪಿಲ್ಲ. ರೈತರು ಇದೀಗ ಬತ್ತ, ರಾಗಿಯ ನಾಟಿ ಕಾರ್ಯ ಆರಂಭಿಸಿದ್ದು, ನೀರಿಲ್ಲದೇ ತೊಂದರೆಯಾಗಿದೆ ಎಂದು ದೂರಿದರು.
ಇನ್ನೊಂದು ವಾರದೊಳಗೆ ಸಮರ್ಪಕವಾಗಿ ನಮ್ಮ ಭಾಗಕ್ಕೆ ನೀರು ತಲುಪದಿದ್ದರೆ ಪ್ರತಿಭಟನೆ ಇನ್ನಷ್ಟು ಉಗ್ರರೂಪ ತಾಳಲಿದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ರವೀಂದ್ರ, ಸಿದ್ದೇಗೌಡ, ಪುಟ್ಟಲಿಂಗಯ್ಯ, ರಾಜಶೇಖರ್, ಕೃಷ್ಣಪ್ಪ, ಶಿವಲಿಂಗಯ್ಯ, ಪ್ರಭು, ಸುರೇಶ್ ಇತರರು ಇದ್ದರು.