ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ಕೋಟಿ ಮೌಲ್ಯದ ವಸ್ತು ವಶ

Last Updated 19 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಉತ್ತರ ವಿಭಾಗದ ಪೊಲೀಸರು 319 ಪ್ರಕರಣಗಳನ್ನು ಭೇದಿಸಿ 4.01 ಕೋಟಿ ರೂಪಾಯಿ ಮೌಲ್ಯದ ಆಭರಣ, ವಾಹನ ಹಾಗೂ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

`ಸಿಬ್ಬಂದಿ ಒಂದೂವರೆ ತಿಂಗಳ ಅವಧಿಯಲ್ಲಿ 199 ಆರೋಪಿಗಳನ್ನು ಬಂಧಿಸಿದ್ದಾರೆ. ಇವರ ಬಂಧನದಿಂದ ಐದು ದರೋಡೆ, ಹದಿನೇಳು ಸುಲಿಗೆ, ಇಪ್ಪತ್ತೆಂಟು ಸರಗಳವು, 182 ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ. ಐದು ಕೆ.ಜಿ ಚಿನ್ನಾಭರಣ, ಹದಿನೈದು ಕೆ.ಜಿ ಬೆಳ್ಳಿ ವಸ್ತುಗಳು, ಎಂಬತ್ತು ಲಕ್ಷ ರೂಪಾಯಿ ಮೌಲ್ಯದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಅತ್ಯುತ್ತಮ ಕಾರ್ಯ ನಿರ್ವಹಿಸಿರುವ ಸಿಬ್ಬಂದಿ ತಂಡಕ್ಕೆ ಎರಡು ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ~ ಎಂದು ಅವರು ಹೇಳಿದರು.

`ಜೆ.ಸಿ.ನಗರದ ಪೆಮ್ಮೇಗೌಡ ರಸ್ತೆಯಲ್ಲಿರುವ ಚಂದನ್ ಜ್ಯುವೆಲರ್ಸ್‌ ಅಂಗಡಿಗೆ ಕನ್ನ ಹಾಕಿ ಆಭರಣ ಕಳವು ಮಾಡಿದ್ದ ಪ್ರಕರಣವನ್ನು ಭೇದಿಸಿರುವ ಜೆ.ಸಿ.ನಗರ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 47 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಎರಡು ಲಕ್ಷ ರೂಪಾಯಿ ಬೆಲೆ ಬಾಳುವ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ~ ಎಂದು ಮಿರ್ಜಿ ಮಾಹಿತಿ ನೀಡಿದರು.

`ಚಿನ್ನದ ಲೇಪ ಇರುವ ಲೋಹವನ್ನು ಚಿನ್ನವೆಂದು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಆರು ಮಂದಿಯನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಕಿಶನ್, ಮೋಹನ್, ಪ್ರೇಮಾ, ಗಂಗಾ, ಬಬ್ಲು ಮತ್ತು ಲಕ್ಷ್ಮಿ ಬಂಧಿತ ಆರೋಪಿಗಳು. ಲಕ್ಷ್ಮಿ ಮೈಸೂರು ನಿವಾಸಿಯಾದರೆ ಉಳಿದವರು ಮಹಾರಾಷ್ಟ್ರ ಮೂಲದವರು. ಅವರಿಂದ ನಾಲ್ಕು ಲಕ್ಷ ನಗದು ಜಪ್ತಿ ಮಾಡಲಾಗಿದೆ.

ಚಿನ್ನದ ಲೇಪವಿರುವ ಲೋಹದ ಬೃಹತ್ ಗಾತ್ರದ ಸರ ತೋರಿಸುತ್ತಿದ್ದ ಅವರು ಮಾರಾಟ ಮಾಡುವುದಾಗಿ ಹೇಳುತ್ತಿದ್ದರು. ಚಿನ್ನದ ಸಾಚಾತನ ಪರೀಕ್ಷಿಸಿ ಎಂದು ಅಸಲಿ ಚಿನ್ನದ ಗುಂಡುಗಳನ್ನು ನೀಡುತ್ತಿದ್ದರು. ಆ ನಂತರ ಇಡೀ ಸರವನ್ನು ಮಾರಾಟ ಮಾಡಿ ಹಣ ಪಡೆದು ಪರಾರಿಯಾಗುತ್ತಿದ್ದರು. ಆರೋಪಿಗಳು ಪೀಣ್ಯ ನಿವಾಸಿ ಜಂಗಮಯ್ಯ ಎಂಬುವರಿಗೆ ವಂಚಿಸಿದ್ದರು~ ಎಂದರು.

`ಪುರುಷೋತ್ತಮ್, ಶಿವಕುಮಾರ್, ಕೇಶವಮೂರ್ತಿ, ಮಂಜು ಮತ್ತು ದಿಲೀಪ್ ಎಂಬ ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿರುವ ರಾಜಾಜಿನಗರ ಪೊಲೀಸರು 2.41 ಲಕ್ಷ ರೂಪಾಯಿ ಮೌಲ್ಯದ ಎಂಟು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಇವರ ಬಂಧನದಿಂದ ರಾಜಾಜಿನಗರ, ಕಾಮಾಕ್ಷಿಪಾಳ್ಯ ಮತ್ತು ಕೆಂಪಾಪುರ ಅಗ್ರಹಾರ ಠಾಣೆಯಲ್ಲಿ ದಾಖಲಾಗಿದ್ದ ಎಂಟಕ್ಕೂ ಹೆಚ್ಚು ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ~ ಎಂದು ಮಿರ್ಜಿ ತಿಳಿಸಿದರು.

ಉತ್ತರ ವಿಭಾಗದ ಡಿಸಿಪಿ ಎಚ್.ಎಸ್.ರೇವಣ್ಣ, ಮಲ್ಲೇಶ್ಚರ ಉಪ ವಿಭಾಗದ ಎಸಿಪಿ ಎಸ್.ಎನ್.ಗಂಗಾಧರ್, ಯಶವಂತಪುರ ಉಪ ವಿಭಾಗದ ಎಸಿಪಿ ಎನ್.ಹನುಮಂತಪ್ಪ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಸಿ.ವಿ.ದೀಪಕ್, ಜಿ.ಯು.ಸೋಮೇಗೌಡ, ಬಿ.ಎನ್.ಶಾಮಣ್ಣ, ರವಿಕುಮಾರ್ ಮತ್ತು ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿದೆ.

 ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್ ಕುಮಾರ್, ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಪ್ರಣವ್ ಮೊಹಾಂತಿ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT