ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಗೆ ಕುಲ ಹೇಳುತ್ತೆ

Last Updated 18 ಜುಲೈ 2012, 19:30 IST
ಅಕ್ಷರ ಗಾತ್ರ

ಕಡ್ಡಾಯ ಶಿಕ್ಷಣ ಹಕ್ಕು (ಆರ್.ಟಿ.ಇ.) ಕಾಯ್ದೆಯಡಿ ಬಡ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವ ವಿಚಾರವಾಗಿ “ಸಮುದ್ರಕ್ಕೆ ಕೊಳಚೆ ನೀರು ಬಂದು ಸೇರಿದರೆ ಇಡೀ ಸಮುದ್ರವೇ ಕೊಳಚೆಯಾಗುತ್ತದೆ....” ಎಂದು ರಾಜ್ಯ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ ಸಂಘ (ಕುಸ್ಮಾ)ದ ಅಧ್ಯಕ್ಷರಾದ ಜಿ.ಎಸ್. ಶರ್ಮರವರ ಸ್ಪಟಿಕದಂತಹ ನುಡಿಗಳನ್ನು ಕೇಳಿ ಹಾಲು ಕುಡಿದಷ್ಟು ಆನಂದವಾಯಿತು.

ಮತ್ತೆ ಮುಂದುವರಿದು “ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ಸಂಸ್ಕೃತಿ ವಿಭಿನ್ನ” ಎಂದು ತಿಳಿಸಿ ಶಾಲೆಗಳು ಹೇಗೆ ತಾರತಮ್ಯವನ್ನು ಬೆಳೆಸುವ, ಪೋಷಿಸುವ ತಾಣಗಳಾಗಿವೆ ಎಂಬ ಸತ್ಯವನ್ನು ಎಳ್ಳಷ್ಟೂ ಮುಚ್ಚುಮರೆಯಿಲ್ಲದೆ ಹೇಳುವ ಮೂಲಕ ಆಧುನಿಕ ಹರಿಶ್ಚಂದ್ರರಾಗಿದ್ದಾರೆ.

ಅವರು ಆಡಿರುವ ಸ್ಪಟಿಕದಂತಹ ಸತ್ಯದರ್ಶನದ ನುಡಿಗಳು ಸಂವಿಧಾನ ವಿರೋಧಿಯಾಗಿದ್ದರೂ ಸಹ ಸಮುದ್ರದ ನೀರು ಯಾವಾಗಲೂ ಶುದ್ಧ ಆಗಿರಬೇಕು ಎಂಬ ಕಾರಣದಿಂದ ಅದನ್ನು ಎಲ್ಲರೂ ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು.

ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಅಹೋರಾತ್ರಿ ದುಡಿಯುತ್ತಾ ಮಕ್ಕಳ ಮನಸ್ಸನ್ನು ಶುದ್ಧ ನೀರಿನಂತೆ ನಿಷ್ಕಲ್ಮಶವಾಗಿಡಲು ಪ್ರಯತ್ನಿಸುತ್ತಾ ಮುತ್ತಿನಹಾರದಂತಹ ನುಡಿಗಳನ್ನಾಡುವ ಅಂತಹವರನ್ನು ಪಡೆದ ಕನ್ನಡಾಂಬೆ ನಿಜಕ್ಕೂ ಧನ್ಯಳು. ಅವರನ್ನು ಕನ್ನಡನಾಡು ಶುದ್ಧ ಮನಸ್ಸಿನಿಂದ ಶುದ್ಧ ನೀರಿನಲ್ಲಿ ಸನ್ಮಾನಿಸಬೇಕು.

“ನುಡಿದರೆ ಮುತ್ತಿನ ಹಾರದಂತಿರಬೇಕು” ಎಂಬ ಬಸವಣ್ಣನವರ ನುಡಿಗನುಗುಣವಾಗಿ ಬದುಕುತ್ತಿರುವ ಮಿಸ್ಟರ್ ಜಿ.ಎಸ್. ಶರ್ಮರವರನ್ನು ನೋಡಿ ನನ್ನಂತಹ ಕೊಳಚೆ ನೀರಿನ ಮನಸ್ಸು “ನಾಲ್ಗೆ ಕುಲ ಹೇಳುತ್ತೆ” ಎಂದು ಹೇಳಿದರೆ ದೇವರು ಕ್ಷಮಿಸುತ್ತಾನೆಯೇ....!? ಕ್ಷಮಿಸದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT