ನವದೆಹಲಿ (ಪಿಟಿಐ): ಭಾರತ ತಂಡದ ಕೆಲ ಕ್ರಿಕೆಟಿಗರನ್ನು ಕತ್ತೆಗಳು ಎಂದು ಕರೆದಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಅವರ ಹೇಳಿಕೆ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಕ್ರೋಶ ವ್ಯಕ್ತಪಡಿಸಿದೆ.
`ಹುಸೇನ್ ಹೇಳಿಕೆ ಬಗ್ಗೆ ನಮ್ಮ ಆಕ್ಷೇಪವಿದೆ. ಈ ಹೇಳಿಕೆ ಸಂಬಂಧ ಪರಿಶೀಲನೆ ನಡೆಸಿ ಬಿಸಿಸಿಐ ಮುಂದಿನ ಹೆಜ್ಜೆ ಇಡಲಿದೆ~ ಎಂದು ಬಿಸಿಸಿಐ ಉಪಾಧ್ಯಕ್ಷ ಹಾಗೂ ಕೇಂದ್ರ ಸಚಿವ ರಾಜೀವ್ ಶುಕ್ಲಾ ತಿಳಿಸಿದ್ದಾರೆ.
`ವೀಕ್ಷಕ ವಿವರಣೆ ನೀಡುವವರು ಇಂತಹ ಮಾತುಗಳನ್ನು ಹೇಳಬಾರದು. ಮನಸ್ಸಿನ ಮೇಲೆ ನಿಯಂತ್ರಣ ಇಟ್ಟುಕೊಂಡು ಮಾತನಾಡಬೇಕು. ಆಟಗಾರರು ಯಾವ ರೀತಿಯ ಪ್ರದರ್ಶನವನ್ನಾದರೂ ನೀಡಲಿ ಅವರನ್ನು ಗೌರವಿಸಬೇಕು~ ಎಂದು ಶುಕ್ಲಾ ಹೇಳಿದ್ದಾರೆ.
ಮ್ಯಾಂಚೆಸ್ಟರ್ನಲ್ಲಿ ಬುಧವಾರ ನಡೆದ ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಕ್ರಿಕೆಟ್ ಪಂದ್ಯದ ವೇಳೆ ಹುಸೇನ್ ಭಾರತದ ಕೆಲ ಆಟಗಾರರನ್ನು ಕತ್ತೆಗಳು ಎಂದು ಕರೆದಿದ್ದರು. ಈ ಪಂದ್ಯದಲ್ಲಿ ಇಂಗ್ಲೆಂಡ್ 6 ವಿಕೆಟ್ಗಳ ಗೆಲುವು ಸಾಧಿಸಿತ್ತು.
ಮುನಾಫ್ ಪಟೇಲ್ ಎಸೆತದಲ್ಲಿ ಕೆವಿನ್ ಪೀಟರ್ಸನ್ ನೀಡಿದ ಕ್ಯಾಚ್ ಪಡೆಯುವಲ್ಲಿ ಪಾರ್ಥಿವ್ ಪಟೇಲ್ ವಿಫಲರಾದಾಗ ಹುಸೇನ್ ಈ ರೀತಿ ಟೀಕೆ ಮಾಡಿದ್ದರು.
`ಉಭಯ ತಂಡಗಳ ನಡುವೆ ಇರುವ ವ್ಯತ್ಯಾಸ ಕ್ಷೇತ್ರ ರಕ್ಷಣೆ. ಇಂಗ್ಲೆಂಡ್ ಅತ್ಯುತ್ತಮ ಫೀಲ್ಡಿಂಗ್ ಸಾಮರ್ಥ್ಯ ಹೊಂದಿದೆ. ಭಾರತದಲ್ಲಿ 3-4 ಮಂದಿ ಉತ್ತಮ ಫೀಲ್ಡರ್ಗಳು ಇದ್ದಾರೆ. ಆದರೆ 1-2 ಫೀಲ್ಡರ್ಗಳು ಅಂಗಳದಲ್ಲಿ ಕತ್ತೆಗಳು~ ಎಂದಿದ್ದರು.
ಈ ಹೇಳಿಕೆಗೆ ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಸಂಬಂಧ ಹುಸೇನ್ ಕ್ಷಮೆಯಾಚಿಸಬೇಕು ಎಂದಿದ್ದಾರೆ.
`ಇಂತಹ ತಪ್ಪುಗಳು ಮತ್ತೆ ಸಂಭವಿಸಬಾರದು. ಈ ಸಂಬಂಧ ಬಿಸಿಸಿಐ ಸೂಕ್ತ ಕ್ರಮಕ್ಕೆ ಮುಂದಾಗಬೇಕು~ ಎಂದು ಪಾಕಿಸ್ತಾನ ತಂಡದ ಮಾಜಿ ಬ್ಯಾಟ್ಸ್ಮನ್ ಜಹೀರ್ ಅಬ್ಬಾಸ್ ತಿಳಿಸಿದ್ದಾರೆ.