ಹೊಸಕೋಟೆ: ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಯೊಂದಕ್ಕೆ ಸರಕು ಸಾಗಣೆ ಟೆಂಪೋ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ರಸ್ತೆಯ ಆವಲಹಳ್ಳಿ ಬಳಿ ನಡೆದಿದೆ.
ಮೃತರನ್ನು ಆಂಧ್ರದ ಚಿತ್ತೂರು ಜಿಲ್ಲೆಯ ಕೊಡತಪಲ್ಲಿಯ ಚಂದ್ರಪ್ಪ (40) ಮತ್ತು ಬೋವಿಪಲ್ಲಿಯ ಮುನಿಸ್ವಾಮಿ (55) ಎಂದು ಗುರುತಿಸಲಾಗಿದೆ. ತಾವು ಬೆಳೆದ ಪಪ್ಪಾಯಿ ಹಣ್ಣನ್ನು ಮಾರಾಟ ಮಾಡಲು ಬೆಂಗಳೂರಿನ ಮಾರುಕಟ್ಟೆಗೆ ಲಾರಿಯಲ್ಲಿ ತೆಗೆದುಕೊಂಡು ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಟೆಂಪೋ ಚಾಲಕ ಪರಾರಿಯಾಗಿದ್ದಾನೆ. ಆವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶವ ಪತ್ತೆ: ಇಲ್ಲಿನ ಕೋಟೆ ಪ್ರದೇಶದ ಅರಳಿಕಟ್ಟೆ ಬಳಿ ಅಪರಿಚಿತ ವ್ಯಕ್ತಿಯ ಶವವೊಂದು ಮಂಗಳವಾರ ಪತ್ತೆಯಾಗಿದೆ.
ಸುಮಾರು 55 ವರ್ಷ ವಯಸ್ಸಿನ ಈ ವ್ಯಕ್ತಿ ಖಾಕಿ ಬಣ್ಣದ ನಿಕ್ಕರ್, ನೀಲಿ- ಕಪ್ಪು ಬಣ್ಣದ ಗೆರೆಯುಳ್ಳ ತುಂಬು ತೋಳಿನ ಶರ್ಟ್ ಧರಿಸಿದ್ದ. ಆತನ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದು, ಯಾವುದೋ ಕಾಯಿಲೆಯಿಂದ ಸತ್ತಿರಬಹುದು ಎಂದು ಶಂಕಿಸಲಾಗಿದೆ.
ಹೊಸಕೋಟೆ ಪೊಲೀಸರು ಅಸ್ವಾಭಾವಿಕ ಸಾವಿನ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.