ಮೈಸೂರು: `ಪೆರಿಯಾರ್ ರಾಮಸ್ವಾಮಿ ಅವರ ಕಾಲದಲ್ಲಿ ನಿಜಗುಣ ಶಿವಯೋಗಿಗಳು ಕ್ರಾಂತಿಕಾರಿ ಬದುಕು ಸಾಗಿಸಿದ್ದರು' ಎಂದು ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ಹೇಳಿದರು.
ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಪಟೇಲ್ ನಂಜಪ್ಪ ಶ್ರೀಮತಿ ಪಾರ್ವತಮ್ಮ, ಮಾದಯ್ಯ ಶ್ರೀಮತಿ ಪಾರ್ವತಮ್ಮಣ್ಣಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ `ನಿಜಗುಣ ಶಿವಯೋಗಿಗಳ ಜೀವನ ಮತ್ತು ಸಾಧನೆ' ವಿಷಯ ಕುರಿತು ಉಪನ್ಯಾಸ ನೀಡಿದರು.
`ತಮಿಳುನಾಡಿನಲ್ಲಿ ಶಿಕ್ಷಣ ಪೂರೈಸಿದ ನಿಜಗುಣ ಶಿವಯೋಗಿಗಳು ಪೆರಿಯಾರ್ ರಾಮಸ್ವಾಮಿ ಅವರ ಹೋರಾಟಗಳಿಂದ ಪ್ರಭಾವಿತರಾಗಿದ್ದರು. ಮೇಲ್ವರ್ಗದ ವಿರುದ್ಧ ಹೋರಾಟ ನಡೆಸಿದ್ದರು. ನಂತರ ಅಧ್ಯಾತ್ಮದಲ್ಲಿ ತೊಡಗಿಸಿಕೊಂಡ ಇವರು ಜ್ಞಾನವೃದ್ಧರಾಗಿದ್ದಾರೆ. ಇವರ ಜೀವನ ಮತ್ತು ಸಾಧನೆ ಎಲ್ಲರಿಗೂ ಸ್ಫೂರ್ತಿ' ಎಂದು ಹೇಳಿದರು.
`ಮನುಷ್ಯ ಭೋಗವನ್ನೇ ಬಯಸುತ್ತಾನೆ. ಭೋಗ ಜೀವನ ನಡೆಸಲು ಅಗತ್ಯವಾಗಿ ಬೇಕಾಗಿರುವ ಹಣ ಸಂಪಾದನೆಯನ್ನೇ ಮುಖ್ಯ ಗುರಿಯಾಗಿಸಿಕೊಂಡಿದ್ದಾನೆ. ಸುಖವನ್ನೇ ಬಯಸುವ ಮನಸ್ಸುಗಳು ಝರ್ಜರಿತವಾಗುತ್ತಿವೆ.
ಇದು ಅಧರ್ಮದ ಮಾರ್ಗ. ಬದುಕಿನಲ್ಲಿ ಧರ್ಮವನ್ನು ಅನುಸರಿಸಬೇಕು. ಧರ್ಮ ಸ್ಥಾಯಿ ಆಗಿರಬೇಕು. ಧರ್ಮ, ಅರ್ಥದ ಬದುಕು ನಡೆಸಿದರೆ ಮೋಕ್ಷ ಲಭಿಸುತ್ತದೆ' ಎಂದು ಹೇಳಿದರು.
ನಂಜನಗೂಡು ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಮೊರಬದ ಮಲ್ಲಿಕಾರ್ಜುನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್, ನಿಜಗುಣ ಶಿವಯೋಗಿ ಉಪಸ್ಥಿತರಿದ್ದರು.