ನವದೆಹಲಿ: `ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಂಗಳೂರು ತಾಲ್ಲೂಕಿನ ನಿಡ್ಡೋಡಿಯಲ್ಲಿ ನಾಲ್ಕು ಸಾವಿರ ಮೆ.ವಾ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಮುಂದಾಗಬಾರದು' ಎಂದು ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ. ಇದರಿಂದಾಗಿ ರಾಜ್ಯದ ಪ್ರಸ್ತಾವನೆಗೆ ಹಿನ್ನಡೆಯಾಗಿದೆ.
ಉಷ್ಣ ವಿದ್ಯುತ್ಸ್ಥಾವರಕ್ಕೆ ಅಗತ್ಯವಿರುವ ನಿಡ್ಡೋಡಿ, ಟೆಂಕಮೀಜಾರು, ಬಡಮೀಜಾರು ಗ್ರಾಮಗಳ 400ಮನೆಗಳು ಹಾಗೂ 700ಎಕರೆ ಕೃಷಿ ಭೂಮಿ ಸ್ವಾಧೀನ ಪ್ರಕ್ರಿಯೆಗೆ ಮುನ್ನ ಮೂರು ಗ್ರಾಮಗಳ ಜನರ ಜತೆ ಸಮಾಲೋಚನೆ ನಡೆಸಬೇಕು. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುಂದುವರಿಯಬೇಕು ಎಂದು ಇಂಧನ ಸಚಿವಾಲಯ ಹೇಳಿದೆ.
ನಿಡ್ಡೋಡಿಯಲ್ಲಿ ನಾಲ್ಕು ಸಾವಿರ ಮೆ.ವಾ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸಬೇಕೆಂಬ ಪ್ರಸ್ತಾವನೆಯನ್ನು ಹಿಂದಿನ ಬಿಜೆಪಿ ಸರ್ಕಾರ ಕೇಂದ್ರಕ್ಕೆ ಕಳುಹಿಸಿತ್ತು. ಯೋಜನೆಗೆ 400 ಕುಟುಂಬಗಳು ಸ್ಥಳಾಂತರಿಸಬೇಕು. 700 ಎಕರೆ ಕೃಷಿ ಯೋಗ್ಯ ಭೂಮಿ ವಶಪಡಿಸಿಕೊಳಬೇಕು ಎಂದು ರಾಜ್ಯ ಹೇಳಿತ್ತು.