ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳ ಮುಖಂಡರಾಗಿ ಹೊರಹೊಮ್ಮಬಹುದು ಎನ್ನಲಾಗಿರುವ ಬಿಹಾರದ ಮುಖ್ಯ ಮಂತ್ರಿ ನಿತೀಶ್ಕುಮಾರ್ ಅವರಿಗೆ ಯುರೋಪಿಯನ್ ಒಕ್ಕೂಟ ಶನಿವಾರ ಔತಣಕೂಟ ಏರ್ಪಡಿಸಿತ್ತು.
ಜೆಡಿಯು ನಾಯಕರೂ ಆಗಿರುವ ನಿತೀಶ್ ಅವರೊಂದಿಗೆ ಸಂಸದ ಎನ್.ಕೆ. ಸಿಂಗ್, ರಾಜ್ಯ ಸಚಿವ ವಿಜಯ ಕುಮಾರ್ ಚೌಧರಿ, ಬಿಹಾರದ ಸಾಂಸ್ಕೃತಿಕ ಸಲಹೆಗಾರ ಹಾಗೂ ಭೂತಾನ್ನ ಮಾಜಿ ರಾಯಭಾರಿ ಪವನ್ಕುಮಾರ್ ವರ್ಮಾ ಅವರೂ ಪಾಲ್ಗೊಂಡಿದ್ದರು.
1976ರ ಬ್ಯಾಚಿನ ಐಎಫ್ಎಸ್ ಅಧಿಕಾರಿಯಾಗಿದ್ದ ಪವನ್ಕುಮಾರ್ ವರ್ಮಾ ಕಳೆದ ವರ್ಷ ಸ್ವಯಂನಿವೃತ್ತಿ ಪಡೆದು, ನಿತೀಶ್ಕುಮಾರ್ ಅವರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಎಂಟು ತಿಂಗಳ ಹಿಂದೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೂ ಯುರೋಪಿಯನ್ ಒಕ್ಕೂಟ ಔತಣಕೂಟ ಆಯೋಜಿಸಿತ್ತು. ಆಗ ಜರ್ಮನಿಯ ರಾಯಭಾರಿ ಮೈಕೇಲ್ ಸ್ಟಿನೆರ್ ಆಮಂತ್ರಿತರಾಗಿದ್ದರು. ಮೋದಿ ಅವರನ್ನು ಭೇಟಿ ಮಾಡಿದ 8 ತಿಂಗಳ ನಂತರ ಒಕ್ಕೂಟ ಇದೀಗ ನಿತೀಶ್ ಅವರಿಗೆ ಔತಣಕೂಟ ಏರ್ಪಡಿಸಿದೆ. ಆದರೆ, ಈ ಹಿಂದೆ ಮೋದಿ ಜತೆ ನಡೆಸಿದ ಔತಣಕೂಟದ ಕುರಿತು ಒಕ್ಕೂಟ ಯಾರಿಗೂ ಸುದ್ದಿ ಬಿಟ್ಟು ಕೊಟ್ಟಿರಲಿಲ್ಲ.