ಬೆಂಗಳೂರು: `ಒಂದು ವದಂತಿ ಸೃಷ್ಟಿಸಿದ ಗೊಂದಲದಿಂದ ನಗರದಲ್ಲಿ ವಾಸವಾಗಿರುವ ಈಶಾನ್ಯ ರಾಜ್ಯಗಳ ಜನ ಭಯಭೀತರಾಗಿದ್ದಾರೆ. ಆದರೆ, ನಗರದಲ್ಲಿ ಈಶಾನ್ಯ ರಾಜ್ಯದವರ ಮೇಲೆ ಹಲ್ಲೆ ನಡೆದಿಲ್ಲ. ಮುಂದೆ ಕೂಡ ನಡೆಯುವುದಿಲ್ಲ~ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮ ಪಚಾವ್ ಭರವಸೆ ನೀಡಿದರು.
ಈಶಾನ್ಯ ರಾಜ್ಯಗಳ ಜನರ ಮೇಲೆ ಹಲ್ಲೆಯ ವದಂತಿ ಹಾಗೂ ವಲಸೆ ವಿಚಾರವಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಗುರುವಾರ ಕರೆಯಲಾಗಿದ್ದ ಸಭೆಯಲ್ಲಿ ಅವರು ಈ ಅಭಯ ನೀಡಿದರು.
`ನಗರದಲ್ಲಿ ಹರಿದಾಡುತ್ತಿರುವ ಈ ಸುಳ್ಳು ಸಂದೇಶಗಳು ಈಶಾನ್ಯ ರಾಜ್ಯಗಳ ಜನರ ಮೇಲೆ ಕೆಟ್ಟ ಪರಿಣಾಮ ಬೀರಿವೆ. ಬೆಂಗಳೂರಿನಲ್ಲಿ ವಾಸವಾಗಿರುವ ಈಶಾನ್ಯ ರಾಜ್ಯಗಳ ಜನರಿಗೆ ಮಾಲೀಕರು ಮನೆ ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ ಎಂಬ ದೂರುಗಳು ಬರುತ್ತಿದೆ. ಇಂತಹ ಯಾವುದೇ ಸಮಸ್ಯೆಗಳಿಗೆ ಗುರಿಯಾದವರು ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿ. ರಕ್ಷಣೆ ನಮ್ಮ ಜವಾಬ್ದಾರಿ~ ಎಂದರು.
`ನಗರದಲ್ಲಿ ಈಶಾನ್ಯ ರಾಜ್ಯಗಳ ಜನರ ಭದ್ರತೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಇಂತಹ ಪರಿಸ್ಥಿತಿಗೆ ಕಾರಣವಾದ ಆ ಸಂದೇಶದ ಮೂಲ ಹುಡುಕುತ್ತಿದ್ದೇವೆ. ಸೈಬರ್ ಅಪರಾಧ ದಳದ ಪೊಲೀಸರು ಅದನ್ನು ಪತ್ತೆ ಹಚ್ಚುತ್ತಿದ್ದಾರೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು~ ಎಂದರು.