ಹರಿಹರಪಲ್ಲತ್ತಡ್ಕ (ಸುಬ್ರಹ್ಮಣ್ಯ): `ಜಿಲ್ಲೆಯ ಮೂಲನಿವಾಸಿಗಳಾದ ಮಲೆಕುಡಿಯ ಜನಾಂಗವನ್ನು ಕಡೆಗಣಿಸಲಾಗುತ್ತಿದೆ. ಅರಣ್ಯ ಹಕ್ಕು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನಮ್ಮ ಜನಾಂಗಕ್ಕೆ ನಿರಂತರ ಕಿರುಕುಳ ಮುಂದುವರಿದು ಅನ್ಯಾಯವಾಗುತ್ತಿದೆ. ಇದರ ವಿರುದ್ಧ ಜಿಲ್ಲೆಯಲ್ಲಿ ಪ್ರಬಲ ಹೋರಾಟ ನಡೆಸಲಾಗುವುದು~ ಎಂದು ಬೆಳ್ತಂಗಡಿ ಆದಿವಾಸಿ ಮಲೆಕುಡಿಯ ಸೇವಾ ಟ್ರಸ್ಟ್ನ ಅಧ್ಯಕ್ಷ ಬಾಬು ಮಲೆಕುಡಿಯ ಎಚ್ಚರಿಸಿದರು.
ಹರಿಹರಪಲ್ಲತ್ತಡ್ಕದಲ್ಲಿ ಭಾನುವಾರ ನಡೆದ ಐದು ಗ್ರಾಮಗಳ ಮಲೆಕುಡಿಯ ನಿವಾಸಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. `ನಮ್ಮನ್ನು ದಲಿತರೆಂದು ಬಿಂಬಿಸಿ ರಾಜಕೀಯ ಲಾಭಗಳಿಸುವ ಹುನ್ನಾರವಾಗುತ್ತಿದೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲೂ ನಮ್ಮ ಜನಾಂಗದ ಮಧ್ಯೆ ಒಡಕು ಮೂಡಿಸಲಾಗುತ್ತಿದೆ. ಅರಣ್ಯ ಹಕ್ಕು ಸೇರಿದಂತೆ ಹಲವಾರು ಸೌಲತ್ತುಗಳು ಇನ್ಯಾರದೋ ಪಾಲಾಗುತ್ತಿದೆ.
ನಮ್ಮ ಹತ್ತು ಹಲವಾರು ಬೇಡಿಕೆಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ, ಮೂಲ ಸೌಲಭ್ಯಗಳಿಗಾಗಿ ಸಂಘಟಿತ ಹೋರಾಟ ನಡೆಸಿ ಸ್ವಾವಲಂಬಿ ಬದುಕು ನಡೆಸಬೇಕು. ಈ ನಿಟ್ಟಿನಲ್ಲಿ ಟ್ರಸ್ಟ್ ಜಿಲ್ಲೆಯಾದ್ಯಂತ ಗ್ರಾಮಗಳಲ್ಲಿ ಸಂಚರಿಸಿ ಸಂಘಟಿಸುವ ಕೆಲಸ ನಡೆಸುತ್ತಿದೆ ಎಂದರು.
ಸಮಿತಿ ರಚನೆ: ರಾಮಣ್ಣ ಮಲೆಕುಡಿಯ ಅಧ್ಯಕ್ಷತೆ ವಹಿಸಿದ್ದರು. ನಂತರ ಐದು ಗ್ರಾಮಗಳನ್ನೊಳಗೊಂಡ ಮಲೆಕುಡಿಯರ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ವಾಸುದೇವ ಕಾಂತಕುಮೇರಿ, ಉಪಾಧ್ಯಕ್ಷರಾಗಿ ಸೀತಾರಾಮ ಮುಂಡಕಜೆ, ಕಾರ್ಯದರ್ಶಿಯಾಗಿ ಹರೀಶ ಹರಿಹರ, ಜತೆ ಕಾರ್ಯದರ್ಶಿಯಾಗಿ ಮಮತ ಕಲ್ಲೇಮಠ ಆಯ್ಕೆಯಾದರು.
ಸಭೆಯಲ್ಲಿ ಆದಿವಾಸಿ ಮಲೆಕುಡಿಯರ ಸೇವಾ ಟ್ರಸ್ಟ್ ಕಾರ್ಯದರ್ಶಿ ಸುಧಾಕರ, ಉಪಾಧ್ಯಕ್ಷೆ ಜಯಂತಿ, ಮಾಧವ ಸುಬ್ರಹ್ಮಣ್ಯ, ಉಪಕಾರ್ಯದರ್ಶಿ ಯೋಗೇಂದ್ರ, ಆದಿವಾಸಿ ಬುಡಕಟ್ಟು ಹಿತರಕ್ಷಣಾ ವೇದಿಕೆಯ ಬಿ.ಕೆ ಬಾಸ್ಕರ ಬೆಂಡೋಡಿ ಮೊದಲಾದವರು ಇದ್ದರು.