ಹಾಸನ: ನಗರದ ಚನ್ನಪಟ್ಟಣದಲ್ಲಿ ಗೃಹಮಂಡಳಿಯವರು ರೂಪಿಸಿ, ಬಾಕಿ ಉಳಿದಿರುವ 17 ನಿವೇಶನಗಳ ಹರಾಜಿಗೆ ಜನರು ವಿರೋಧ ವ್ಯಕ್ತಪಡಿಸಿದ ಪರಿಣಾಮ ಹರಾಜು ಪ್ರಕ್ರಿಯೆಯನ್ನು ರದ್ದುಮಾಡಿರುವ ಘಟನೆ ಶುಕ್ರವಾರ ನಡೆದಿದೆ.
ಉಳಿದ ನಿವೇಶನದಗಳ ಸಾರ್ವಜನಿಕ ಹರಾಜಿಗೆ ಸಿದ್ಧತೆ ಮಾಡಿಕೊಂಡಿದ್ದ ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಬಂದು ಹರಾಜು ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. `ಇಲ್ಲಿ ನಿವೇಶನಗಳಿಗೆ ತುಂಬ ಬೇಡಿಕೆ ಇದೆ. ಹಿಂದೆ ಚದರ ಅಡಿಗೆ 800 ರೂಪಾಯಿ ಬೆಲೆ ನಿಗದಿ ಮಾಡಿ ಮಂಡಳಿಯವರು ನಿವೇಶನ ಹಂಚಿಕೆ ಮಾಡಿದ್ದು, ಇಂದು ಅದರ ಬೆಲೆ ಸಾವರ ರೂಪಾಯಿ ದಾಟಿದೆ.
ಹರಾಜು ನಡೆಸಿದರೆ ನಿವೇಶನಗಳು ಉಳ್ಳವರ ಅಥವಾ ರಿಯಲ್ ಎಸ್ಟೇಟ್ ದಂಧೆನಡೆಸುವವರ ಪಾಲಾಗುತ್ತವೆ. ಅರ್ಜಿ ಸಲ್ಲಿಸಿದ್ದರೂ ನಿವೇಶನ ಸಿಗದಿರುವಂಥ ಸಾವಿರಾರು ಮಂದಿ ಬಾಕಿ ಉಳಿದಿದ್ದು ಉಳಿದ ನಿವೇಶನಗಳನ್ನು ಅವರಿಗೇ ಹಂಚಬೇಕು ಅಥವಾ ಲಾಟರಿ ಮೂಲಕ ಆಯ್ಕೆ ಮಾಡಬೇಕು~ ಎಂದು ಜನರು ಒತ್ತಾಯಿಸಿದರು.
ಕೊನೆಗೆ ಮಂಡಳಿಯ ಹಿರಿಯ ಅಧಿಕಾರಿಗಳೊಡನೆ ದೂರವಾಣಿ ಮುಖಾಂತರ ಮಾತನಾಡಿದ ಅಧಿಕಾರಿಗಳು ಹರಾಜು ಪ್ರಕ್ರಿಯೆಯನ್ನು ರದ್ದು ಮಾಡಿ ತೆರಳಿದರು.
ಹಾವು ಕಚ್ಚಿ ಬಾಲಕ ಸಾವು
ಹಾವು ಕಚ್ಚಿದ್ದರಿಂದ ಅಸ್ವಸ್ಥನಾಗಿದ್ದ ಹತ್ತು ವರ್ಷದ ಬಾಲಕನೊಬ್ಬ ಚಿಕಿತ್ಸೆ ಫಲಿಸದೆ ಶುಕ್ರವಾರ ಸಾವನ್ನಪ್ಪಿದ್ದಾನೆ. ದುದ್ದ ಹೋಬಳಿ ಜೋಡಿಕೃಷ್ಣಾಪುರದ ಕಲ್ಲಪ್ಪ ಎಂಬುವವರ ಪುತ್ರ ಹೇಮಂತ್ (10) ಮೃತಪಟ್ಟ ಬಾಲಕ. ಭಾನುವಾರ (ಅ.9) ಬೆಳಿಗ್ಗೆ ಹಸುವನ್ನು ಮೇಯಿಸಲು ಹೊಲಕ್ಕೆ ಹೋಗಿದ್ದ ಬಾಲಕ ಹಸುವನ್ನು ಮರವೊಂದಕ್ಕೆ ಕಟ್ಟಿ ಹೊಲದಲ್ಲಿ ಶುಂಠಿ ಕೀಳಲು ಹೋಗಿದ್ದ. ಈ ಸಂದರ್ಭದಲ್ಲಿ ಆತನ ಎಡಕೈಗೆ ಹಾವು ಕಚ್ಚಿತ್ತು. ವಿಷ ಮೈಗೆ ಏರಿದ್ದರಿಂದ ಬಾಲಕ ಅಲ್ಲಿಯೇ ಬಿದ್ದಿದ್ದ. ಮನೆಯವರಿಗೆ ಈ ವಿಚಾರ ತಿಳಿದ ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಕೊನೆಯುಸಿರೆಳೆದಿದ್ದಾನೆ. ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.