ವೈಕುಂಠ ಏಕಾದಶಿ, ಮುಕ್ಕೋಟಿ ದ್ವಾದಶಿ, ಶುಕ್ಲ ಪಕ್ಷ ಏಕಾದಶಿ ಧರ್ನುಮಾಸದಲ್ಲಿ ಬರುವ ಈ ದಿನ ವಿಷ್ಣುವಿನ ಆರಾಧಕರ ನಂಬಿಕೆಯಂತೆ ವೈಕುಂಠ ದ್ವಾರ ತೆರೆಯುವ ದಿನ ಎಂಬುದು ನಂಬಿಕೆ. ಮಾರ್ಗಶಿರ ಶುಕ್ಲ ಪಕ್ಷದ ಈ ಏಕಾದಶಿ `ಮೋಕ್ಷದ ಏಕಾದಶಿ' ಎಂದೂ ಹೆಸರಾಗಿದೆ.
ನಗರದ ಬನ್ನೇರುಘಟ್ಟ ಸಮೀಪದ ನಿಸರ್ಗ ಬಡಾವಣೆಯಲ್ಲಿರುವ ಪ್ರಸನ್ನ ವರದ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ವಿಜೃಂಭಣೆಯಿಂದ ಆಚರಿಸಲಾಗುವುದು. ನಿರ್ಮಾಣ್ ದೇವಾಲಯಗಳ ವಿಶ್ವಸ್ಥ ಮಂಡಳಿಯ ಆಶ್ರಯದಲ್ಲಿ ಇಲ್ಲಿನ ಪ್ರಸನ್ನವರದ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ನಡೆಯುತ್ತದೆ. ಸೇವಾಕರ್ತರಿಗೆ ಮತ್ತು ವಿಶೇಷ ಆಹ್ವಾನಿತರಿಗೆ ಭಾನುವಾರ ಬೆಳಿಗ್ಗೆ 4.30ರಿಂದ 8.00ರವರೆಗೆ ವಿಶೇಷ ದರ್ಶನ ಮತ್ತು ಎಲ್ಲ ಭಕ್ತಾದಿಗಳಿಗೆ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಭಗವದ್ದರ್ಶನ ನಡೆಯುತ್ತದೆ. ಇಡೀ ದಿನ ವಿವಿಧ ಭಜನಾ ಮಂಡಳಿಗಳಿಂದ ಹರಿ ಸಂಕೀರ್ತನೆ ಹಾಗೂ ನಾನಾ ವಾದ್ಯ ಸೇವೆಗಳು ನಡೆಯಲಿವೆ.
ಅನಂತ ಹೆಗಡೆ ಗಾಯನ
ಹಿಂದೂಸ್ತಾನಿ ಗಾಯಕ ಹೆಗ್ಗಾರ ಅನಂತ ಹೆಗಡೆ ಅವರಿಂದ ಭಾನುವಾರ ಸಂಜೆ 6 ಗಂಟೆಯಿಂದ `ಭಕ್ತಿ ಸಂಗೀತ' ಕಾರ್ಯಕ್ರಮವಿದೆ. ಇವರಿಗೆ ಹೆಗ್ಗಾರ ರಾಜಾರಾಮ ಹೆಗಡೆ ಹಾರ್ಮೋನಿಯಂ ಮತ್ತು ಮಹೇಶ ಹೆಗಡೆ ತಬಲಾ ಸಾಥಿ ನೀಡುವರು. ಸಂಜೆ 7.30ರಿಂದ ವಿದುಷಿ ಗೀತಾ ಸತ್ಯಮೂರ್ತಿ ಅವರಿಂದ ಸಂಗೀತ ಕಾರ್ಯಕ್ರಮವಿದೆ.
ಸ್ಥಳ: ಪುರಂದರ ಮಂಟಪ, ನಿಸರ್ಗ ಬಡಾವಣೆ.
ಹುಳಿಮಾವು ವಿನಾಯಕ ದೇಗುಲದಲ್ಲಿ
ಇಲ್ಲಿನ ಸ್ಫೂರ್ತಿ ಗಣಪತಿ ಸಹಿತ ಸತ್ಯನಾರಾಯಣ ಸ್ವಾಮಿ ದೇಗುಲದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಹಲವು ಧಾರ್ಮಿಕ ಕಾರ್ಯಕ್ರಮ ಏರ್ಪಾಡಾಗಿದೆ. ಬೆಳಿಗ್ಗೆ ಸುಪ್ರಭಾತ ಸೇವೆ, ಪುರಾಣ ಶ್ರವಣ, ಪಂಚಾಮೃತಾಭಿಷೇಕ, ತೋಮಾಲೆ ಸೇವೆ, ಅಲಂಕಾರ, ಸಹಸ್ರಾರ್ಚನೆ, ವೈಕುಂಠ ದ್ವಾರ ಪೂಜೆ, ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗವಿದೆ.
ಬೆಳಿಗ್ಗೆ 6 ಗಂಟೆಗೆ ಮದ್ದೂರು ತಾಲ್ಲೂಕಿನ ಚಿಕ್ಕರಸಿನ ಕೆರೆಯ ಪವಾಡ ಸದೃಶವಾದ `ಬಸವಣ್ಣ' (ಕಾಲಭೈರವೇಶ್ವರ ಸ್ವಾಮಿ) ಈ ದೇಗುಲಕ್ಕೆ ಬರಲಿದ್ದಾರೆ.
ಸಂಜೆ 7 ಗಂಟೆಯಿಂದ ಶ್ರೀ ಕಲಾ ನಾಟ್ಯ ಶಾಲೆಯವರಿಂದ ಶ್ರೀನಿವಾಸ ಕಲ್ಯಾಣ ನೃತ್ಯ ರೂಪಕ ನಡೆಯಲಿದೆ ಎಂದು ದೇವಾಲಯದ ವ್ಯವಸ್ಥಾಪಕರಾದ ವೇಣುಗೋಪಾಲ್ ತಿಳಿಸಿದ್ದಾರೆ.