ಮಧುಗಿರಿ: ನೀತಿ ಸಂಹಿತೆ ಉಲ್ಲಂಘನೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಸಿ.ಅನಿತಾ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ಷೇತ್ರದಲ್ಲಿ ಒಟ್ಟು 242 ಮತಗಟ್ಟೆಗಳಿವೆ. ಅದರಲ್ಲಿ 71 ಅತಿಸೂಕ್ಷ್ಮ, 70 ಸೂಕ್ಷ್ಮ, 101 ಸಾಮಾನ್ಯ ಮತಗಟ್ಟೆಗಳು. ಚಂದ್ರಬಾವಿ, ಮುದ್ದೇನಹಳ್ಳಿ ಕ್ರಾಸ್, ಶ್ರಾವಂಡನಹಳ್ಳಿ, ಚಿನಕವಜ್ರ, ರಂಟವಾಳಲು ಗ್ರಾಮಗಳಲ್ಲಿ ಚೆಕ್ಪೋಸ್ಟ್ ತೆರೆಯಲಾಗಿದೆ ಎಂದು ಅವರು ನುಡಿದರು.
ನೀತಿ ಸಂಹಿತೆ ಉಲ್ಲಂಘನೆ ದೂರು ನೀಡಲು ದೂರವಾಣಿ ಸಂಖ್ಯೆ 08137- 282323 ಸಂಪರ್ಕಿಸಬಹುದು ಎಂದು ತಿಳಿಸಿದರು.
ಮದ್ಯ ನಿಯಂತ್ರಣ
ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಸಂಗ್ರಹಣೆ, ಸಾಗಾಣಿಕೆ, ಹಂಚಿಕೆ ಮತ್ತು ಮಾರಾಟ ತಡೆಯಲು ಅಬಕಾರಿ ಇಲಾಖೆ ಸೂಕ್ತ ಯೋಜನೆ ರೂಪಿಸಿದೆ ಎಂದು ಅಬಕಾರಿ ಉಪ ಅಧೀಕ್ಷಕ ಎಂ.ಡಿ.ಜಯರಾಮೇಗೌಡ ಹೇಳಿದರು.
ಮಧುಗಿರಿ, ಕೊರಟಗೆರೆ, ಶಿರಾ ಮತ್ತು ಪಾವಗಡ ವಲಯದಲ್ಲಿ ಒಟ್ಟು 9 ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಆಂಧ್ರ ಗಡಿ ಮೂಲಕ ಸೇಂದಿ ಮತ್ತು ನಕಲಿ ಮದ್ಯ ಸರಬರಾಜು ತಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಅಕ್ರಮ ಮದ್ಯ ಸಂಗ್ರಹಣೆ, ಸಾಗಣೆ, ಹಂಚಿಕೆ ಕಂಡುಬಂದರೆ ಮಧುಗಿರಿ ಉಪವಿಭಾಗದ ಕಚೇರಿ ದೂರವಾಣಿ ಸಂಖ್ಯೆ 08137-284366ಗೆ ತಿಳಿಸಬೇಕು ಎಂದು ವಿನಂತಿಸಿದರು.
ಜಾಗೃತಿ ಆಂದೋಲನ
ತುಮಕೂರು: ಒಳ ಮೀಸಲಾತಿ ಕುರಿತಂತೆ ದಲಿತರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಮಾದಿಗ ದಂಡೋರ ದಲಿತ ಮತದಾರರ ಜಾಗೃತಿ ಆಂದೋಲನಏ.15ರಿಂದ 22ರವರೆಗೆ ನಡೆಯಲಿದೆ.
ವಿವಿಧ ರಾಜಕೀಯ ಪಕ್ಷಗಳು ದಲಿತರನ್ನು ಕಡೆಗಣಿಸುತ್ತಿರುವುದನ್ನು ಈ ಸಂದರ್ಭ ಮತದಾರರ ಗಮನಕ್ಕೆ ತರಲಾಗುವುದು. ಜತೆಗೆ ಒಳ ಮೀಸಲಾತಿ ಹೋರಾಟಕ್ಕೆ ಸಂಘಟಿಸಲಾಗುವುದು ಎಂದು ಮಾದಿಗ ದಂಡೋರದ ಜಿಲ್ಲಾ ಘಟಕದ ಅಧ್ಯಕ್ಷ ಚಿಕ್ಕಹಳ್ಳಿ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚುನಾವಣೆ ಮಾಹಿತಿ
ಪಾವಗಡ: ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣದಲ್ಲಿ ತಹಶೀಲ್ದಾರ್ ಆಲ್ತಾಫ್ ಪಾಷ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿದರು.
ನೀತಿ ಸಂಹಿತೆ, ನಾಮ ನಿರ್ದೇಶನ, ನಾಮಪತ್ರ ಸಲ್ಲಿಕೆ ವಿಧಾನ, ಚುನಾವಣೆ ಖರ್ಚು- ವೆಚ್ಚಗಳ ಬಗ್ಗೆ ಅಭ್ಯರ್ಥಿಗಳಿಗೆ ಆರ್ಒ ಗಂಗಯ್ಯ ಮಾಹಿತಿ ನೀಡಿದರು. ನೋಡೆಲ್ ಅಧಿಕಾರಿ ಮುದ್ದುಕೃಷ್ಣೇಗೌಡ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.