ವಿಜಾಪುರ: ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ವಿಶೇಷ ಒತ್ತು ನೀಡಲಾಗುತ್ತಿದ್ದು, ಅಗತ್ಯಬಿದ್ದರೆ ಬಾಂಡ್ಗಳ ಮೂಲಕವೂ ಹಣ ಸಂಗ್ರಹಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
‘ನೀರಾವರಿ ಯೋಜನೆಗಳಿಗೆ ಅದರಲ್ಲೂ ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಕೃಷ್ಣಾ ನ್ಯಾಯಮಂಡಳಿ ತೀರ್ಪಿನ ಸೂಕ್ಷ್ಮಅಂಶಗಳ ಬಗೆಗೆ ಹಾಗೂ ನ್ಯಾಯಮಂಡಳಿ ಎದುರು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ವಿಧಾನ ಮಂಡಳದಲ್ಲಿ ಒಂದು ವಾರಗಳ ಕಾಲ ಮುಕ್ತ ಚರ್ಚೆಗೆ ಸಿದ್ಧ. ಇದಕ್ಕೆ ವಿರೋಧ ಪಕ್ಷದವರು ಸಹಕಾರ ನೀಡಬೇಕು’ ಎಂದು ಶನಿವಾರ ತಾಲ್ಲೂಕಿನ ತೊನಶ್ಯಾಳ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ಏಪ್ರಿಲ್ ಮೊದಲವಾರದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಕೆಲವರ ಖಾತೆಗಳು ಬದಲಾವಣೆಯಾಗಲಿವೆ.
ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ನೀಡುವುದಿಲ್ಲ. ಐದು ವರ್ಷ ಅಧಿಕಾರ ಪೂರೈಸುತ್ತೇನೆ’ ಎಂದರು.‘ಕೃಷಿ ಬಜೆಟ್ನ್ನು ಇಡೀ ದೇಶವೇ ಎದುರು ನೋಡುತ್ತಿದೆ. ಕೇಂದ್ರ ಸರ್ಕಾರ ಹಾಗೂ ಇತರ ರಾಜ್ಯಗಳಿಗೆ ಇದು ಮಾದರಿಯೂ ಆಗಲಿದೆ. ಒಂದೇ ವರ್ಷದಲ್ಲಿ ಅಲ್ಲದಿದ್ದರೂ ಹಂತ ಹಂತವಾಗಿ ರೈತರು ಸ್ವಾಭಿಮಾನದಿಂದ ಜೀವನ ನಡೆಸಲು ಈ ಬಜೆಟ್ ದಾರಿದೀಪವಾಗಲಿದೆ’ ಎಂದು ಮುಖ್ಯಮಂತ್ರಿಗಳು ವ್ಯಾಖ್ಯಾನಿಸಿದರು.